ಬೆಳಗಾವಿ: ‘ಪಿಯುಸಿ ಮೊದಲ ವರ್ಷ ಪ್ರವೇಶ ಪಡೆಯಲು ಬಯಸುವ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಯ್ಕರ್ ಎಜ್ಯುಕೇಷನ್ ಸೊಸೈಟಿ ವತಿಯಿಂದ ₹ 25 ಲಕ್ಷ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ’ ಎಂದು ರವೀಂದ್ರನಾಥ ಟ್ಯಾಗೋರ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸಿ.ಎನ್. ನಾಯ್ಕರ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ಪಾಸಾದ ನಂತರ ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕ ತೊಂದರೆಯಿಂದಾಗಿ ಪಿಯುಸಿ ಶಿಕ್ಷಣ ಮುಂದುವರಿಸುತ್ತಿಲ್ಲ. ಹೀಗಾಗಿ ಅವರಿಗೆ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಿದ್ದೇವೆ’ ಎಂದು ನುಡಿದರು.
‘ಸಂಸ್ಥೆಯ ವತಿಯಿಂದ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಅತಿ ಹೆಚ್ಚು ಅಂಕ ಗಳಿಸಿದ ಶೇ 10ರಷ್ಟು ಅಗ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು’ ಎಂದು ಹೇಳಿದರು.
‘ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಲ್ಲಿ ಅಷ್ಟೇ ಅಲ್ಲದೇ, ಇತರ ಕಾಲೇಜುಗಳ ವಿದ್ಯಾರ್ಥಿಗಳೂ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಆಸಕ್ತ ವಿದ್ಯಾರ್ಥಿಗಳು ಇದೇ 25ರೊಳಗೆ ರವೀಂದ್ರನಾಥ ಟ್ಯಾಗೋರ್ ಪಿಯು ಕಾಲೇಜಿನಲ್ಲಿ ಹೆಸರು ನೋಂದಾಯಿಸಬೇಕು’ ಎಂದು ತಿಳಿಸಿದರು.
ನಾಯ್ಕರ್ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷೆ ಶ್ವೇತಾ ನಾಯ್ಕರ್ ಉಪಸ್ಥಿತರಿದ್ದರು.