ಬೆಳಗಾವಿ: ‘ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಂಗ್ಲ ಭಾಷಾ ಕಲಿಕೆಯೂ ಅನಿವಾರ್ಯ. ವಿವಿಧ ದೇಶಗಳಿಗೆ ಕೆಲಸ ಅರಸಿಕೊಂಡು, ವ್ಯಾಪಾರ– ಉದ್ದಿಮೆ ಮಾಡಲು ಉನ್ನತ ಶಿಕ್ಷಣ ಪಡೆಯಲು ಹೋಗುತ್ತಿರುವ ನಮ್ಮ ಮಕ್ಕಳು ಆಂಗ್ಲ ಭಾಷಾ ಸಂವಹನ ಕೌಶಲ ಪಡೆಯುವುದು ಅಪೇಕ್ಷಣೀಯ’ ಎಂದು ಸಾಹಿತಿ ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೋಮವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅತಿಥಿ, ರಶ್ಮಿ ಜೈನ್, ‘ಪ್ರತಿ ಮಗುವಿನಲ್ಲಿ ಅವರದೇ ಆದ ಪ್ರತಿಭೆ, ಸೃಜನಶೀಲತೆ ಇರುತ್ತದೆ. ಅದನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕೇ ವಿನಃ ಒಂದು ಮಗುವಿನ ಕಲಿಕಾ ಸಾಮರ್ಥ್ಯವನ್ನು ಇನ್ನೊಂದು ಮಗುವಿನ ಸಾಮರ್ಥ್ಯದೊಂದಿಗೆ ಹೋಲಿಸಬಾರದು’ ಎಂದರು.
ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ ಹಾಡು ಹಾಗೂ ನೃತ್ಯ ಕಣ್ಮನ ಸೆಳೆದವು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಪ್ರಾಚಾರ್ಯ ಪ್ರೇಮಾನಂದ ಜಾಧವ ಸ್ವಾಗತಿಸಿದರು. ಶಿಕ್ಷಕಿಯರಾದ ಸುನೀತಾ ಚೌಗಲೆ, ಸೀಮಾ ಚಿಟ್ನಿಸ್ ಪ್ರಾರ್ಥಿಸಿದರು. ಸ್ನೇಹಾ ಗುಂಡೆ ವಾರ್ಷಿಕ ವರದಿ ವಾಚನ ಮಂಡಿಸಿದರು.
ಸರಿತಾ ಪಾಟೀಲ ಹಾಗೂ ಸವಿತಾ ಇಳಿಗೇರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗೀತಾ ತಿಪ್ಪಿಮಠ, ಮೀನಾಕ್ಷಿ ಯರಗಾಂವಿ ಹಾಗೂ ಅಮೃತಾ ಬೈಲೂರ, ಸುನೀತಾ ಚೌಗಲೆ ಹಾಗೂ ರೋಹಿಣಿ ಚಾಜಗೌಡ, ರಂಜನಾ ಕಾಳೆ ಇದ್ದರು.