ಅಥಣಿ: ‘ಪುಣ್ಯ ಪುರುಷರ ಭವ್ಯ ಪರಂಪರೆ, ಅವರ ಬದುಕಿನ ದಾರಿ ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶನ ಪಥವಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಾಪೂರ ಹೇಳಿದರು.
ಲಿಂಗರಾಜ ಜಯಂತ್ಯುತ್ಸವ ಸಮಿತಿ, ಕೆಎಲ್ಇ ಅಂಗ ಸಂಸ್ಥೆಗಳ ವತಿಯಿಂದ ಇಲ್ಲಿನ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ 159ನೇ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ದೇಸಾಯಿಗಳ ವಾಡೆಯಲ್ಲಿಯ ಕ್ರೌರ್ಯ, ದಬ್ಬಾಳಿಕೆಯ ಸಂಸ್ಕೃತಿಯನ್ನು ಹತ್ತಿಕ್ಕಿ ಅವು ಜನಮುಖಿ, ಸಮಾಜಮುಖಿ ಹಾಗೂ ಮಹಿಳಾಮುಖಿಯಾಗಲು ಪರಿವರ್ತನೆ ಮಾಡುವಲ್ಲಿ ಶಿರಸಂಗಿ ಲಿಂಗರಾಜರ ಪರಿಶ್ರಮ ದೊಡ್ಡದು’ ಎಂದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಮಹಾಂತೇಶ ಉಕ್ಕಲಿ ಮಾತನಾಡಿದರು.
ದಾನಿಗಳಾದ ಜಗದೀಶ ನೇಮಗೌಡ, ಬಸವರಾಜ ಇಟ್ನಾಳ, ಮಲ್ಲಿಕಾರ್ಜುನ ಸಂಕ ಹಾಗೂ ಎ.ಎಸ್. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾಷಣ ಹಾಗೂ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿವಾಸ ಚೌದರಿ (ಪ್ರಾಥಮಿಕ ಶಾಲೆ), ಸಾಗರ ಸಂಕ್ರಟ್ಟಿ (ಪ್ರೌಢಶಾಲೆ) ಮತ್ತು ನೀಲಾಂಬಿಕಾ ಹೊನ್ನೊಳ್ಳಿ (ಕಾಲೇಜು ವಿಭಾಗ) ಹಾಡಿದರು.