* ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ಮತ್ತು ಸುತ್ತಮುತ್ತ ಸೇರಿದಂತೆ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.
* ವಿವಿಧ ಕಡೆಗಳಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರು ಸಮಾವೇಶ ಸ್ಥಳ ಹಾಗೂ ವಾಹನಗಳನ್ನು ನಿಲ್ಲಿಸಿದ್ದ ಜಾಗ ತಲುಪಲು ಸರಾಸರಿ 4–5 ಕಿ.ಮೀ. ನಡೆಯಬೇಕಾಯಿತು.
* ನಗರದಾದ್ಯಂತ ಇಡೀ ದಿನ ವಿವಿಐಪಿಗಳ ಸಂಚಾರ ಇದ್ದಿದ್ದರಿಂದ, ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಸಾರ್ವಜನಿಕರು ತೀವ್ರವಾಗಿ ಪರದಾಡಿದರು. ಅಲ್ಲದೇ, ಆ ಮಾರ್ಗಗಳಲ್ಲಿನ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ತಳ್ಳು ಗಾಡಿಗಳನ್ನು ಕೂಡ ತೆರವುಗೊಳಿಸಲಾಗಿತ್ತು! ಒಂದು ರೀತಿ ಲಾಕ್ಡೌನ್ ಮಾದರಿಯ ವಾತಾವರಣ ನಿರ್ಮಾಣವಾಗಿತ್ತು.
* ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚರಿಸುವ ಮಾರ್ಗದಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿತ್ತು. ಸ್ವಚ್ಛತೆ ಕಾಪಾಡಿಕೊಳ್ಳಲಾಗಿತ್ತು. ಆ ಫೋಟೊಗಳನ್ನು ತೆಗೆದ ಹಲವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಹಾಕಿಕೊಂಡಿದ್ದರು. ಇಂತಹ ವಿವಿಐಪಿಗಳು ಆಗಾಗ ಬರಲಿ, ಆ ನೆಪದಲ್ಲಾದರೂ ರಸ್ತಗಳು ಸುಧಾರಣೆ ಕಾಣಲಿ ಎಂಬ ಒಕ್ಕಣೆಗಳನ್ನು ಹಾಕಿದ್ದು ಸಾಮಾನ್ಯವಾಗಿತ್ತು.
* ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆಲವರು, ಹೋಗುವಾಗ ಬ್ಯಾನರ್ಗಳು, ಬಿಜೆಪಿ ಬಾವುಟಗಳು ಮತ್ತು ಕಟೌಟ್ಗಳನ್ನು ಕೂಡ ಒಯ್ದರು. ಮರದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಕಟ್ಟಿದ್ದ ಬಾವುಟಗಳನ್ನು ಕಿತ್ತುಕೊಳ್ಳಲು ಕೆಲವರು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
* ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದಷ್ಟೇ ಪ್ರಮಾಣದ ಜನರು ನಗರದ ಅಲ್ಲಲ್ಲಿ ಹಾಗೂ ರಸ್ತೆಗಳಲ್ಲಿದ್ದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಲಾಗಿತ್ತು. ಅವುಗಳೊಂದಿಗೆ ಜನರೂ ಇದ್ದರು. ಬಹಳಷ್ಟು ಮಂದಿ ಸಮಾವೇಶ ತಲುಪಲಾಗದೆ ಅಲ್ಲೇ ಉಳಿದಿದ್ದರು! ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆಯುತ್ತಿದ್ದುದು ಕೂಡ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.