ಬೈಲಹೊಂಗಲ: ‘ರಂಗಭೂಮಿ ಜಾತಿ, ಮತ, ಧರ್ಮವನ್ನು ಮೀರಿದ ವೇದಿಕೆ. ಅಲ್ಲಿ ಸಿಗುವ ಅನುಭವ ಒಳ್ಳೆಯ ವ್ಯಕ್ತಿಯಾಗಿ ರೂಪಿಸಲು ಸಹಕಾರಿಯಾಗುತ್ತದೆ’ ಎಂದು ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಡಿನಾಡು ಕಾಸರಗೋಡಿನಿಂದ ರಂಗ ಚಿನ್ನಾರಿ ತಂಡದ ನೇತೃತ್ವದಲ್ಲಿ ಬೆಳಗಾವಿ ಗಡಿಯಲ್ಲಿರುವ ವಿದ್ಯಾರ್ಥಿಗಳಿಗೆ ನಡೆದ ರಂಗ ರಸಗ್ರಾಹಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಒರೆಗೆ ಹಚ್ಚಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ರಂಗ ರಸಗ್ರಾಹಿ ಶಿಬಿರ ಮಾಡುವ ಮೂಲಕ ಹೊಸ ಸಾಹಸ, ರಂಗಭಾಷೆ ಬರೆದಿದ್ದಾರೆ’ ಎಂದರು.
ರಂಗನಟ, ನಿರ್ದೇಶಕ ಕಾಸರಗೋಡು ಚಿನ್ನಾ, ‘ರಂಗಭೂಮಿ ನನ್ನ ಪ್ರೀತಿಯ ಕ್ಷೇತ್ರ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಕಲಿತ ವಿದ್ಯೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ’ ಎಂದರು.
ಮೂಕಾಭಿನಯ, ಮುಖವಾಡ ತಯಾರಿಕೆ, ಹಾಡುಗಳು, ಪ್ರಸಾಧನ ಸೇರಿದಂತೆ ನಟನಾ ಶಿಬಿರ ನಡೆಸಲಾಯಿತು.
ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಮಾತನಾಡಿದರು. ನಿರ್ದೇಶಕರಾದ ಪ್ರಕಾಶ ಬೋಸ್ನವರ್ಕರ, ಅರುಣ ಪ್ರಕಾಶ ನಾಯಕ, ಕಾಶಿನಾಥ ಬಿರಾದಾರ, ಎಂ.ಎಚ್.ಪೆಂಟೇದ ವೇದಿಕೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.