ಭಗವಂತನ ಅನುಗ್ರಹವು ಪ್ರಾಪ್ತವಾಗಬೇಕಾದರೆ ನಮ್ಮಲ್ಲಿ ಸಮರ್ಪಣಾ ಮನೋಭಾವ ಇರಬೇಕಾಗುತ್ತದೆ. ನಿಷ್ಠೆಯಿಂದ ಸೇವೆ ಮಾಡುವ ಸೇವಕನಿಗೆ ರಾಜನಾದವನು ಯಾವ ಪದವಿಯನ್ನಾದರೂ ಕರುಣಿಸುತ್ತಾನೆ. ಭಕ್ತನಿಗೆ ಭಗವಂತನೇ ರಾಜನು. ಭಕ್ತಿಯಿಂದ ಭಗವಂತನ ಸೇವೆ ಮಾಡಿದರೆ ಯಾವುದೇ ಕೊರತೆ ಆಗದಂತೆ ಆತನು ನೋಡಿಕೊಳ್ಳುತ್ತಾನೆ. ಎಲ್ಲ ಶಿವಶರಣರಿಗೆ ಒಲಿದಾತ ಒಬ್ಬನೇ ದೇವರು. ಜೇಡರ ದಾಸಿಮಯ್ಯ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ತೆಲುಗು ಜೊಮ್ಮಯ್ಯ ಇವರೆಲ್ಲರಿಗೂ ಒಲಿದಾತನೇ ತನಗೂ ಒಲಿಯುತ್ತಾನೆ ಎಂಬ ಅಚಲ ನಂಬಿಕೆ ಬಸವಣ್ಣನವರಿಗೆ ಇದೆ. ಅಂತಹ ನಂಬಿಕೆಯನ್ನು ಇಟ್ಟುಕೊಂಡು ಭಗವಂತನನ್ನು ಆರಾಧಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ.