ಬೆಳಗಾವಿ: ‘ಮಠ-ಮಂದಿರಗಳು ಹಾಗೂ ಗೋವುಗಳ ರಕ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್- ಬಜರಂಗ ದಳ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಇಲ್ಲಿನ ರುದ್ರಕೇಸರಿ ಮಠದ ಹರಿಗುರು ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್–ಬಜರಂಗ ದಳದ ವತಿಯಿಂದ ಈಚೆಗೆ ನಡೆದ ‘ಅಖಂಡ ಭಾರತ ಸಂಕಲ್ಪ ದಿವಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಸಂಘಟನೆಯ ಕಾರ್ಯಕರ್ತರು ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಸಂಕಲ್ಪವಾಗಿ ಸ್ವೀಕರಿಸಿದ್ದಾರೆ. ಲವ್ ಜಿಹಾದ್ ತಡೆಯಲು ಶ್ರಮಿಸುತ್ತಿದ್ದಾರೆ’ ಎಂದರು.
ಜಿಲ್ಲಾ ಸಂಯೋಜಕ ಬಾವುಕಣ್ಣ ಲೋಹಾರ, ‘ಬೆಂಗಳೂರಿನಲ್ಲಿ ನಡೆದ ಗಲಭೆಯಂತಹ ಘಟನೆಗಳು ಮುಂದುವರಿದರೆ ಸಂಘಟನೆಯ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ಪರಿಣಾಮ ತೀವ್ರವಾಗಿರುತ್ತದೆ’ ಎಂದು ಹೇಳಿದರು.
ನಗರ ಘಟಕದ ಅಧ್ಯಕ್ಷ ಬಸವರಾಜ ಬಾಬೂಜಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಭಾರತ ಅಖಂಡ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಿವೆ. ಅಪಾಯಕಾರಿ ಚೀನಾ ನಮ್ಮ ಗಡಿಯೊಳಗೆ ಬರುವ ಸಾಹಸ ಮಾಡುತ್ತಿದೆ. ಇದನ್ನು ಎದುರಿಸಲು ನಮ್ಮ ಸೈನಿಕರ ಆತ್ಮಬಲ ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕು. ಆತ್ಮನಿರ್ಭರ ಭಾರತಕ್ಕಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಸ್ವದೇಶಿ ಚಿಂತನೆ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಾಂತ ಕೋಶಾಧ್ಯಕ್ಷರಾದ ಕೃಷ್ಣ ಭಟ್, ಶ್ರೀಕಾಂತ ಕದಂ, ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಚಳಕೇರಿ, ಕಾರ್ಯದರ್ಶಿ ವಿಜಯ ಜಾಧವ, ನಗರ ಘಟಕದ ಕಾರ್ಯದರ್ಶಿ ಹೇಮಂತ ಹವಳ, ನಗರ ಘಟಕದ ಸಂಯೋಜಕ ಆದಿನಾಥ ಗಾವಡೆ, ಬಸವರಾಜ ಹಳಿಂಗಳಿ, ಬಸವರಾಜ ಗಾಣಿಗಿ, ಆನಂದ ಕರಲಿಂಗನ್ನವರ, ಶ್ಯಾಮ ಬತ್ತುಲ್ಕರ, ಅರ್ಜುನ ರಜಪೂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.