ತಲ್ಲೂರ: ಗ್ರಾಮದಲ್ಲಿ ವಿಜಯದಶಮಿಯನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.
ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಸಂಜೆ ವಿಜಯ ದಶಮಿ ಹಾಗೂ ಮಹಾನವಮಿ ಹಬ್ಬದ ನಿಮಿತ್ತ ಗ್ರಾಮದ ಗೌಡರ ಮನೆತನದ ಮಲ್ಲಿಕಾರ್ಜುನ ಅಣ್ಣಿಗೇರಿಗೌಡರ ನಾಲ್ಕು ದಿಕ್ಕುಗಳಿಗೂ ಬಾಣ ಬಿಟ್ಟು ‘ಬನ್ನಿ ಕಾರ್ಯಕ್ರಮ’ಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ವೇದಮೂರ್ತಿ ಬಸಯ್ಯ ಸ್ವಾಮೀಜಿ, ‘ಪೂಜೆ–ಪುನಸ್ಕಾರ ಮಾಡುವುದರಿಂದ ಸುಖ–ಶಾಂತಿ ಲಭಿಸುತ್ತದೆ. ದೇವಿ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದರು.
ಬಳಿಕ ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಬನ್ನಿ ಎಲೆಯನ್ನು ವಿನಮಯ ಮಾಡಿಕೂಂಡು ಶುಭಾಶಯ ಕೋರಿದರು.
ಇದಕ್ಕೂ ಮುನ್ನ ದೇಸಾಯಿ ವಾಡೆಯಿಂದ ಆರತಿ, ಗ್ರಾಮದ ಯಲ್ಲಮ್ಮನ ದೇವಸ್ಥಾನದಿಂದ ಮೂರ್ತಿ, ಪಲ್ಲಕ್ಕಿ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಹಾದಿಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶ್ರೀಮಂತ ವಿಹಾನ ದೇಸಾಯಿ ಪೂಜೆ ನೆರವೇರಿಸಿದರು. ಮುಖಂಡ ವಿನಯಕುಮಾರ ದೆಸಾಯಿ, ಗ್ರಾ.ಪಂ. ಸದಸ್ಯ ಪ್ರಫುಲ್ಲಚಂದ್ರ ದೇಸಾಯಿ, ಮುಖಂಡರಾದ ಬಾಬುಗೌಡ ಅಣ್ಣಿಗೇರಿ, ಅಶೋಕ ನಾಯ್ಕರ, ಸುಬಾಷ ಭೋವಿ, ಶಿವಯೋಗಿ ಬಡಿಗೇರ, ವಿಜಯ ಉಪ್ಪಿನ ಹಾಗೂ ಗ್ರಾಮಸ್ಥರು ಇದ್ದರು.