ಸವದತ್ತಿ: ಶಾಸಕ ವಿಶ್ವಾಸ್ ವೈದ್ಯ ಅವರ 42ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಅಭಿಮಾನಿಗಳು ಆನೆ ಮೂಲಕ ಅವರಿಗೆ ಹಾರ ಹಾಕಿಸಿ ಸಂಭ್ರಮಾಚರಿಸಿದರು.
ರಾಘವೇಂದ್ರ ದೇವಸ್ಥಾನದಿಂದ ಆರಂಭವಾದ ಆನೆ ಸವಾರಿ ಬೆಣ್ಣಿಕಟ್ಟಿ ಓಣಿಯಿಂದ ಆನಿಆಗಸಿ, ಕಟಕೋಳ ಬ್ಯಾಂಕ್ ವೃತ್ತ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜೊತೆಗೆ ಬೃಹದಾಕಾರದ ಗೊಂಬೆಗಳು, ಲಂಬಾಣಿ ವೇಷಧಾರಿಗಳ ಗುಂಪು, ಪೂರ್ಣಕುಂಭ ಮೆರವಣಿಗೆ ಕಣ್ಮನ ಸೆಳೆದವು.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ, ‘ಉಚಿತ ನೇತ್ರ ಚಿಕಿತ್ಸೆ ಶಿಬಿರದಲ್ಲಿ 1,200ಕ್ಕೂ ಅಧಿಕ ಜನರ ತಪಾಸಣೆ ಹಾಗೂ 600ಕ್ಕೂ ಅಧಿಕ ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ವಿಶ್ವಾಸನಿಗೆ ಶ್ರೀರಕ್ಷೆಯಾಗಿದೆ’ ಎಂದರು.
‘ಅಭಿವೃದ್ಧಿಯಲ್ಲಿ ರಾಜಿ ಮಾತೇ ಇಲ್ಲ. ನಗರ ಸೇರಿ ಪ್ರತಿ ಗ್ರಾಮಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ’ ಎಂದು ಭರವಸೆ ನೀಡಿದರು.
ಬಳಿಕ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿ ಲಂಬಾಣಿ ಸಮುದಾಯ ಶಾಸಕರಿಗೆ ಶುಭಕೋರಿತು. ಲಂಬಾಣಿ ಹಾಡಿಗೆ ವೈದ್ಯ ಅವರ ಪತ್ನಿ ಶ್ರುತಿ, ಪುತ್ರಿ ವೇದಿಕಾ, ಪುತ್ರ ವೇದಾಂತ, ಸಹೋದರ ಅಶ್ವಥ್ ಹಾಗೂ ಅವರ ಪತ್ನಿ ಹೆಜ್ಜೆ ಹಾಕಿದರು.
ಅಲ್ಲಲ್ಲಿ ಬ್ಯಾರಿಕೇಡ್ ಹಾಕಿಸಿ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿತ್ತು. ರಾತ್ರಿಯಿಂದಲೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ರವಿ ದೊಡಮನಿ, ಯಲ್ಲಪ್ಪ ಗೊರವನಕೊಳ್ಳ, ಮಂಜುನಾಥ ಕಾಳಪ್ಪನವರ, ನಾಗಪ್ಪ ಬಡೆಪ್ಪನವರ, ಹನಮಂತ ಹವಾಲ್ದಾರ, ಎಂ. ಮಲ್ಲಪ್ಪ, ವೆಂಕಣ್ಣ ವೈದ್ಯ, ಕಿರಣ ಕುರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.