ಬೆಳಗಾವಿ: ‘ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ವನ್ಯಜೀವಿಗಳ ಕೊಡುಗೆ ಅಪಾರವಾಗಿದ್ದು, ಅವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಚ್.ವಿ. ದರ್ಶನ ಹೇಳಿದರು.
ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗ, ಶಿಕ್ಷಣ ಇಲಾಖೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಸಹಯೋಗದಲ್ಲಿ ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶುಕ್ರವಾರ ನಡೆದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶುದ್ಧ ಪರಿಸರ ವನ್ಯಜೀವಿಗಳ ಮೇಲೆ ಅವಲಂಬಿತವಾಗಿದೆ. ಅವುಗಳನ್ನು ಪ್ರೀತಿಸುವ ಮನಸ್ಸು ಎಲ್ಲರದಾಗಬೇಕು’ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿಎಫ್ಒ ಹರ್ಷ ಭಾನು, ‘ಇಲಾಖೆಯಿಂದ ವಿವಿಧೆಡೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಗಳು ಯಶಸ್ಸು ಕಂಡಿವೆ’ ಎಂದರು.
‘ವನ್ಯಜೀವಿಗಳ ಬದುಕು ಮತ್ತು ಪರಿಸರ’ ಕುರಿತು ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಾಧಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ವನ್ಯಜೀವಿಗಳ ಕುರಿತ ಕವನ ಓದಿದರು.
ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ, ನಗರ ಬಿಇಒ ವೈ.ಜೆ. ಭಜಂತ್ರಿ ಮಾತನಾಡಿದರು. ಸಹಾಯಕ ಔಷಧ ನಿಯಂತ್ರಕ ರಘುರಾಮ್ ನಿಡವಂದ, ವೇದಿಕೆಯ ಖಜಾಂಚಿ ಜಗದೀಶ ಮಠದ ಇದ್ದರು.
ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ನಿರೂಪಿಸಿದರು. ಎಸಿಎಫ್ ಎಂ.ಬಿ. ಕುಸನಾಳ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ವಂದಿಸಿದರು.