ಹಂದಿಗುಂದ: ಚಿಂಚಲಿಯ ಮಹಾಕಾಳಿ ತಂಡದವರು ರಾಯಬಾಗ ತಾಲ್ಲೂಕಿನ ಇಟನಾಳದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಮಹಾಲಕ್ಷ್ಮಿ ಕಬಡ್ಡಿ ತಂಡದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದರು.
ಈ ತಂಡವು ಶುಕ್ರವಾರ ತಡರಾತ್ರಿ ಮುಕ್ತಾಯವಾದ ಟೂರ್ನಿಯಲ್ಲಿ ಚಂದಗಡದ ವಿ.ಕೆ. ಚವಾಣ್ ಪಾಟೀಲ ಕಾಲೇಜಿನ ತಂಡವನ್ನು 13–10ರಿಂದ ಮಣಿಸಿ ಪ್ರಶಸ್ತಿ ಜಯಿಸಿದರು.
ಮೊದಲ ಸೆಮಿಫೈನಲ್ನಲ್ಲಿ ಅತಿಥೇಯ ಚಿಂಚಲಿ ಮಹಾಕಾಳಿ ತಂಡವು ಆಜರಾ ಹಿರಣ್ಯಕೇಶಿ ಸ್ಪೋರ್ಟ್ಸ ಕ್ಲಬ್ ತಂಡಗಳ ನಡುವೆ ಬಿರುಸಿನ ಸೆಣೆಸಾಟ ನಡೆಯಿತು. ಪ್ರತೀಕ್ಷಾ ಸಾಸೂಲಕರ ಅವರು ಸತತ ಬೋನಸ್ ಅಂಕಗಳಿಂದ ತಂಡವನ್ನು ಮುನ್ನಡೆಸಿದರು. ಕೊನೆಯ ಒಂದು ನಿಮಿಷದ ಅವಧಿಯಲ್ಲಿ ದಾಳಿ ಮಾಡುತ್ತಿರುವಾಗ ಸಿಕ್ಕ ಪಾಯಿಂಟ್ಗಳಿಂದಾಗಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಚಿಂಚಲಿ ತಂಡವು 18–13 ಪಾಯಿಂಟ್ಗಳಿಂದ ಫೈನಲ್ ಪ್ರವೇಶಿಸಿತು.
2ನೇ ಸೆಮಿಫೈನಲ್ ಪಂದ್ಯದಲ್ಲಿ ಚಂಡಗಡ– ವಡಗಾವಿಯ ಪೇಟಾ ಸ್ಪೋರ್ಟ್ಸ್ ಕ್ಲಬ್ ತಂಡಗಳ ಮಧ್ಯೆ ಆರಂಭದಿಂದಲೂ ಸಮಬಲದ ಹೋರಾಟ ನಡೆಯಿತು. ಪ್ರತೀಕ್ಷಾ ಕಾಂಬ್ಳೆಕರ ಉತ್ತಮ ದಾಳಿಯ ನೆರವಿನಿಂದ 15–13 ಪಾಯಿಂಟ್ಗಳಿಂದ ಚಂಡಗಡ ತಂಡವು ಪೈನಲ್ ತಲುಪಿತು. ವಡಗಾವಿ ತಂಡವು ಚತುರ್ಥ ಸ್ಥಾನ ಪಡೆಯಿತು.
ಟೂರ್ನಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರ್ತಿಯರಾದ ದೀಪಾ ಮಹಿಶಾಳೆ, ಸಿದ್ದವ್ವ ಚಿಂಚಲಿ, ಲಕ್ಷ್ಮಿ ಪಾಟೀಲ, ಮಹಾದೇವಿ ಪಾಟೀಲ, ನೀಲಕ್ಕ ಮಹಿಶಾಳೆ, ಪ್ರತೀಕ್ಷಾ ಕಾಂಬಳೆ, ಪ್ರತೀಕ್ಷಾ ಸಾಸೂಲಕರ ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಮುತ್ತಪ್ಪ ಡಾಂಗೆ ಹಾಗೂ ಪ್ರಕಾಶ ಮಾರಾಪೂರ ಟ್ರೋಫಿ, ಸ್ಮರಣಿಕೆ ಮತ್ತು ಹಾಗೂ ನಗದು ಬಹುಮಾನ ನೀಡಿದರು.
ಮದಗೊಂಡ ಪೂಜೇರಿ, ಮುತ್ತಪ್ಪ ಪೂಜೇರಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಶಿವರಾಜ ಪಾಟೀಲ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಮಾದು ಮಾರಾಪೂರ, ಮುಖಂಡರಾದ ಮುತ್ತಪ್ಪ ಡಾಂಗೆ, ಸಿದ್ದಪ್ಪ ಸುಣಧೋಳಿ, ಪ್ರಶಾಂತ ಮಾರಾಪೂರ, ಗೋಪಾಲ ತೇರದಾಳ, ಸಿದ್ದಪ್ಪ ಬ್ಯಾಕೋಡ, ನಿರ್ವಾಣಿ ನಾಯಕ, ರವೀಂದ್ರ ಸುಣಧೋಳಿ, ಕರೆಪ್ಪ ಹನಗಂಡಿ, ಮಾರುತಿ ಬಾಗ್ಗೋಳ, ಸಿದ್ದಪ್ಪ ಅರಭಾವಿ, ಭೀಮಶಿ ಮಾರಾಪೂರ, ವಿಠ್ಠಲ ಅರಭಾವಿ ಇದ್ದರು.
ನಿರ್ಣಾಯಕರಾಗಿ ಪಿ.ಎನ್. ಆಲಗೂರ, ಸದಾಶಿವ ಯರಗಟ್ಟಿ, ಬಿ.ಬಿ.ಮಗದುಮ್, ಎಸ್.ಎಂ. ಸಾಲೋಟಗಿ, ಎಚ್. ಮಾದನ್ನವರ, ಅಕ್ಷತಾ ಮಗದುಮ್, ರಮೇಶ ಕೊಳಿಗುಡ್ಡೆ, ಸಿ.ಎಸ್. ಹಿರೇಮಠ ಕಾರ್ಯನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.