ಖಾನಾಪುರ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆ ಸಡಿಲಗೊಳಿಸುವ ಸುಪ್ರೀಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಒಳಸಂಚಿನ ಭಾಗವಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗೆ ಮನವಿ ಕಳುಹಿಸಿದರು. ಕೇಂದ್ರ ಸರ್ಕಾರ ಸಂವಿದಾನಬದ್ಧವಾಗಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಯ್ದೆಯನ್ನು ದುರ್ಬಲಗೊಳಿಸುತ್ತಿದೆ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಅಖಿಲ ಭಾರತ ದಲಿತ ಯುವ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಸಿ.ತಳವಾರ ಮತ್ತು ಭೀಮಸೇನಾ ಸಂಘಟನೆ ಅಧ್ಯಕ್ಷ ಮಲ್ಲೇಶಿ ಪೋಳ, ದಲಿತ ಸಂಘಟನೆ ಮುಖಂಡರಾದ ಸುಭಾಸ ಚಲವಾದಿ, ಸಾಗರ ಅಷ್ಟೇಕರ, ನಾರಾಯಣ ಚಲವಾದಿ, ಶರದ ಹೊನ್ನಾಯ್ಕ, ರಾಜು ಕಾಂಬಳೆ, ರೋಹಿತ ಪೋಳ ಭಾಗವಹಿಸಿದ್ದರು.