ಹೊಸಪೇಟೆ(ವಿಜಯನಗರ): ‘ಎಲ್ಲ ವೃತ್ತಿಪರ ಶಿಕ್ಷಕರಿಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಅವಶ್ಯಕತೆ ಇದೆ. ಕಲಿಕೆಯ ಸಮಯದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಬೋಧನೆ ಪರಿಣಾಮಕಾರಿಯಾಗುತ್ತದೆ’ ಎಂದು ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ವಸಂತಮ್ಮ ಹೇಳಿದರು.
ನಗರದ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಷಾ ಭವರ್ಲಾಲ್ ಬಾಬುಲಾಲ್ ನಾಹರ್ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕುರಿತ 10 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಇಂದು ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದೆ. ಲಾಕ್ಡೌನ್ ಸಂದರ್ಭದಲ್ಲಂತೂ ಬೋಧನಾ ಚಟುವಟಿಕೆ ಆನ್ಲೈನ್ನಲ್ಲಿ ನಡೆದಿವೆ’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ಪ್ರಾಚಾರ್ಯರಾದ ಎಸ್.ಎಂ. ಶಶಿಧರ್, ಎನ್. ವಿಶ್ವನಾಥಗೌಡ, ಸತೀಶ್ ಸೂರಿಮಠ, ಜಗದೀಶ್ ಇದ್ದರು.