ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ತರಕಾರಿಗಿಂತ ಕಸವೇ ಹೆಚ್ಚು!

ಕೆಸರು ಗದ್ದೆಯಂತಾದ ಇಡೀ ವಾತಾವರಣ; ತ್ಯಾಜ್ಯದ ಬಳಿಯೇ ವ್ಯಾಪಾರ ನಡೆಸುವ ಅನಿವಾರ್ಯತೆ
Last Updated 1 ಅಕ್ಟೋಬರ್ 2020, 6:24 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಈಗ ತರಕಾರಿಗಿಂತ ಕಸದ ರಾಶಿಯೇ ಹೆಚ್ಚಾಗಿ ಕಣ್ಣಿಗೆ ರಾಚುತ್ತದೆ!

ಸತತ ಮಳೆಗೆ ಇಲ್ಲಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಅವುಗಳು ಕೆಸರಿನ ಗದ್ದೆ ಸ್ವರೂಪ ಪಡೆದುಕೊಂಡಿವೆ. ನಿತ್ಯ ಇಲ್ಲಿ ಸೃಷ್ಟಿಯಾಗುವ ತ್ಯಾಜ್ಯದ ರಾಶಿ ಅಪಾರ. ಆದರೆ, ಕಸ ಹಾಕುವುದಕ್ಕೆ ನಿರ್ದಿಷ್ಟ ಜಾಗ ಗೊತ್ತು ಪಡಿಸಿದರೂ ಅಲ್ಲಿ ಯಾರೊಬ್ಬರೂ ಹಾಕುವುದಿಲ್ಲ. ತರಕಾರಿ, ಹಣ್ಣು ಮಾರಾಟಗಾರರು ವ್ಯಾಪಾರ ಮುಗಿದ ಬಳಿಕ ಬೇಕಾಬಿಟ್ಟಿಯಾಗಿ ಕೊಳೆತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ.

ನಿತ್ಯ ವಿವಿಧ ಕಡೆಗಳಿಂದ ರೈತರು ಬಂದು ವ್ಯಾಪಾರ ಮಾಡುವುದರಿಂದ ಅಪಾರ ಪ್ರಮಾಣದ ಕಸ ಸಂಗ್ರಹವಾಗುತ್ತದೆ. ಆದರೆ, ಅದಕ್ಕೆ ತಕ್ಕುದಾಗಿ ವಿಲೇವಾರಿ ಆಗುವುದಿಲ್ಲ ಎನ್ನುವುದು ಸ್ಥಳೀಯರ ದೂರು. ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಎಲ್ಲೆಡೆ ಕಸದ ರಾಶಿ ಬಿದ್ದಿದ್ದು, ಅದರ ಬಳಿಯೇ ಕುಳಿತುಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುವಂತಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಗೆ ತ್ಯಾಜ್ಯದ ರಾಶಿ ಕೊಳೆತು ಎಲ್ಲೆಡೆ ದುರ್ಗಂಧ ಹರಡಿದೆ. ತರಕಾರಿ, ಹಣ್ಣು ಖರೀದಿಸಲು ಬಂದವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಎಪಿಎಂಸಿಯ ದುರವಸ್ಥೆ ಕಂಡು ಕೆಲವರು ಈ ಕಡೆ ಬರುವುದೇ ಬಿಟ್ಟಿದ್ದಾರೆ.

‘ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ತರಕಾರಿ, ಹಣ್ಣು ಸಿಗುತ್ತದೆ ಎಂದು ಖರೀದಿಸಲು ಅನಂತಶಯನಗುಡಿಯಿಂದ ಬಂದು ಹೋಗುವೆ. ಆದರೆ, ಕೆಲವು ದಿನಗಳಿಂದ ಅಲ್ಲಿನ ಹೊಲಸು ನೋಡಿದರೆ ಭಯವಾಗುತ್ತದೆ. ಏನೇನೋ ಹೊಸ ರೋಗಗಳು ಬರುತ್ತಿವೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ಸಿಗಬೇಕು. ಅದರಲ್ಲೂ ಮಳೆಗಾಲದಲ್ಲಿ. ಆದರೆ, ಆಗುತ್ತಿರುವುದೇ ಬೇರೆ. ಹೀಗಾಗಿ ಮಾರುಕಟ್ಟೆಗೆ ಹೋಗುವುದನ್ನೇ ಬಿಟ್ಟಿರುವೆ’ ಎಂದು ಅನಂತಶಯನಗುಡಿ ನಿವಾಸಿ ನಂದೀಶ್ವರ ತಿಳಿಸಿದರು.

‘ಮಾರುಕಟ್ಟೆಯ ಇಡೀ ಆವರಣ ಕೆಸರಿನ ಗದ್ದೆಯಾಗಿದೆ. ನಡೆಯಲು ಆಗುವುದಿಲ್ಲ; ಬೈಕ್‌ ಓಡಿಸಲು ಬರೊಲ್ಲ. ನನ್ನಂತಹ ಮಧ್ಯ ವಯಸ್ಕನಿಗೆ ಇಷ್ಟೆಲ್ಲ ಸಮಸ್ಯೆ ಆಗುವುದಾದರೆ ಹಿರಿಯರು ಹೇಗೆ ತಾನೆ ಓಡಾಡಲು ಸಾಧ್ಯ. ಸಂಬಂಧಪಟ್ಟವರು ಕೂಡಲೇ ಈ ಕಡೆ ಗಮನಹರಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಿಜ ಹೇಳಬೇಕೆಂದರೆ ಎಪಿಎಂಸಿಯಲ್ಲಿ ಶಿಸ್ತು ಎನ್ನುವುದೇ ಇಲ್ಲ. ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಾರೆ. ನಂತರ ಕೊಳೆತು ಹೋದ ವಸ್ತುಗಳನ್ನು ಬೇಕಾಬಿಟ್ಟಿ ಎಸೆದು ಹೋಗುತ್ತಾರೆ. ಇದರಿಂದಾಗಿ ನಿತ್ಯ ಕಸ ಹೆಚ್ಚಾಗುತ್ತ ಹೋಗುತ್ತಿದೆ. ಮಳೆ ಬಂದಾಗ ಕೊಳೆತು ಎಲ್ಲೆಡೆ ದುರ್ವಾಸನೆ ಬರುತ್ತದೆ. ಮತ್ತೊಂದೆಡೆ, ನಗರಸಭೆಯವರು ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ. ಹಾಗಾಗಿ ಇಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗುತ್ತಿದೆ. ಆದರೆ, ಹೊಟ್ಟೆಪಾಡಿಗೆ ಅದರಲ್ಲೇ ಕೆಲಸ ಮಾಡುತ್ತಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಹುಲುಗಣ್ಣ ತಿಳಿಸಿದರು.

***

ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ಸ್ವಚ್ಛತೆಗೆ ಮೊದಲ ಆದ್ಯತೆ ಸಿಗಬೇಕು. ಆದರೆ, ಅದು ಕೊನೆಯ ಆದ್ಯತೆಯಾಗಿದ್ದು ದುರಂತ.
-ನಂದೀಶ್ವರ, ಅನಂತಶಯನಗುಡಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT