ಹೂವಿನಹಡಗಲಿ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವವನ್ನು ಈ ವರ್ಷ ಆಚರಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಸದಸ್ಯರು ಶುಕ್ರವಾರ ತಾಲ್ಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಾಡಿನ ಪ್ರಮುಖ ಉತ್ಸವಗಳನ್ನು ಆಚರಿಸಿ, ಹಂಪಿ ಉತ್ಸವಕ್ಕೆ ಮೀನಮೇಷ ಎಣಿಸುವ ಸರ್ಕಾರದ ಧೋರಣೆ ಸರಿಯಲ್ಲ. ಕೋವಿಡ್ ಭೀತಿಯಿಂದಾಗಿ ಎರಡು ವರ್ಷ ಕಾಲ ಜನರಿಗೆ ಮನರಂಜನೆ ಇಲ್ಲದೇ ಸಾಂಸ್ಕೃತಿಕ ಜಡತ್ವ ಆವರಿಸಿದೆ.
ಪ್ರೋತ್ಸಾಹ ಕೊರತೆಯಿಂದ ಕಲಾವಿದರ ಬದುಕು ದುಸ್ಥಿತಿಯಲ್ಲಿದೆ. ಸರ್ಕಾರ ನೆಪ ಹೇಳದೇ ಈ ಬಾರಿ ಹಂಪಿ ಉತ್ಸವ ಆಚರಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಒಕ್ಕೂಟದ ಗೌರವ ಅಧ್ಯಕ್ಷ ಬೀರಬ್ಬಿ ಬಸವರಾಜ, ಅಧ್ಯಕ್ಷ ಎಂ.ಬನ್ನೆಪ್ಪ, ಉಪಾಧ್ಯಕ್ಷ ಎಂ.ಯಲ್ಲಪ್ಪ, ಕಾರ್ಯದರ್ಶಿ ನರೇಂದ್ರ ಗೂರಪ್ಪನವರ, ಸಂಘಟನಾ ಕಾರ್ಯದರ್ಶಿ ಕ್ರಿಷ್ಣಪ್ಪ, ಆರ್.ಬಿ.ನಿಂಗಪ್ಪ ಸೋವೇನಹಳ್ಳಿ, ಮಿಯಾಸಾಬ್, ದ್ವಾರಕೀಶಗೌಡ ಇತರರು ಇದ್ದರು.