ಹೊಸಪೇಟೆ: ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಅವರು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಿಕೊಡುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುರುವಾರ ಶಿಬಿರದ ಎರಡನೇ ದಿನವಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಜನ ಸೇರಿದ್ದಾರೆ. ಬೆಳಿಗ್ಗೆ ಐದು ಗಂಟೆಗೆ ಇಡೀ ಕ್ರೀಡಾಂಗಣ ಭರ್ತಿಯಾಗಿದ್ದು, ಸತತವಾಗಿ ಯೋಗ ಮಾಡುತ್ತಿದ್ದಾರೆ.
ಯೋಗದ ವಿವಿಧ ಆಸನಗಳನ್ನು ಜನ ಆಸಕ್ತಿಯಿಂದ ಮಾಡುತ್ತಿದ್ದಾರೆ. ಮೊದಲ ಸಲ ಯೋಗ ಮಾಡುತ್ತಿರುವವರು ಹೆಣಗಾಟ ನಡೆಸುತ್ತಿರುವುದು ಕಂಡು ಬಂತು. ಪತಂಜಲಿ ಕಾರ್ಯಕರ್ತರು ಅಂತಹವರಿಗೆ ಮಾರ್ಗದರ್ಶನ ಮಾಡಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಭಕ್ತಿಯಿಂದ ಯೋಗ, ಧ್ಯಾನ ಮಾಡುತ್ತಿದ್ದಾರೆ.ಶಿಬಿರವು ಫೆ. 9ರ ವರೆಗೆ ನಡೆಯಲಿದೆ.
ಬಲ್ದೋಟ ಕಂಪನಿ ಶಿಬಿರವನ್ನು ಆಯೋಜಿಸಿದೆ. ನಂದಿಪುರದ ಕಲ್ಯಾಣ ಸ್ವಾಮೀಜಿ ಎರಡನೇ ದಿನದ ಶಿಬಿರವನ್ನು ಉದ್ಘಾಟಿಸಿ, ‘ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ರಾಮದೇವ್ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.