ಹೊಸಪೇಟೆ: ಅವಧಿ ಮುಗಿದ ನಂತರ ನಿರ್ವಹಿಸುವ ಕಾಮಗಾರಿಯ ದಂಡದ ಮೊತ್ತ ಕಡಿತಗೊಳಿಸಬೇಕೆಂದು ಜಿಲ್ಲಾ ಸಿವಿಲ್ ಗುತ್ತಿಗೆದಾರರು ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಅವಧಿ ಮೀರಿದ್ದಕ್ಕೆ ದಂಡ ಹಾಕುತ್ತಿರುವುದರಿಂದ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅದನ್ನು ಕಡಿತಗೊಳಿಸಬೇಕು. ಕೆ.ಕೆ.ಆರ್.ಡಿ.ಬಿ ಹಾಗೂ ಜಿಲ್ಲಾ ಖನಿಜ ನಿಧಿಯಲ್ಲಿ ಪೂರ್ಣಗೊಳಿಸಿದ ಕಾಮಗಾರಿಗಳ ಬಿಲ್ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಬೇಕು. ಹೋಬಳಿ ಅಥವಾ ತಾಲ್ಲೂಕಿನಲ್ಲಿ ಗ್ರಾವೆಲ್ ತೆಗೆಯಲು ಅವಕಾಶ ಮಾಡಿಕೊಡಬೇಕು. ಈ ಹಿಂದೆ ನಿರ್ವಹಿಸಿದ ಕಾಮಗಾರಿಗಳ ಗುಣಮಟ್ಟವನ್ನು ಮೂರನೇ ವ್ಯಕ್ತಿಯಿಂದ ಪರೀಕ್ಷಿಸಲಾಗಿದೆ. ಮತ್ತೆ ಹೊಸಬರಿಂದ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಅನಗತ್ಯ ವಿಳಂಬವಾಗುತ್ತಿದೆ ಎಂದು ಗೋಳು ತೋಡಿಕೊಂಡಿದ್ದಾರೆ.
ಗುತ್ತಿಗೆದಾರರಾದ ಆರ್. ಕೇಶವ ರೆಡ್ಡಿ, ಕೆ. ತಿಪ್ಪೇಸ್ವಾಮಿ, ಬಿ. ಚಂದ್ರಶೇಖರ್, ನಾಗರಾಜ, ವೆಂಕಟೇಶ, ಮಲ್ಲೇಶ್ ರಾಜೇಂದ್ರ ಪ್ರಸಾದ್, ದೇವಿಪ್ರಸಾದ್, ಲಿಂಗಾರೆಡ್ಡಿ, ಕಾಳಿ ಬಸವರಾಜ ಇತರರಿದ್ದರು.