ಸಿರುಗುಪ್ಪ: ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ದುಬೈನಿಂದ ಪಟ್ಟಣಕ್ಕೆ ಮರಳಿರುವ ಸ್ಥಳೀಯ ನಿವಾಸಿಯನ್ನು ತಾಲ್ಲೂಕು ಆಡಳಿತವು 14 ದಿನಗಳವರೆಗೆ ಗೃಹ ಬಂಧನದಲ್ಲಿಟ್ಟು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಕ್ರಮ ಕೈಗೊಂಡಿದೆ.
‘ವ್ಯಕ್ತಿಯು ಮಾರ್ಚ್ 12ರಂದು ದುಬೈನಿಂದ ನೇರವಾಗಿ ಹೈದರಾಬಾದ್ಗೆ ಬಂದಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ರಾಯಚೂರು–ಸಿಂಧನೂರು ಮೂಲಕ ಶುಕ್ರವಾರ ಪಟ್ಟಣಕ್ಕೆ ಬಂದಿದ್ದಾರೆ. ವಿದೇಶದಿಂದ ಯಾರೇ ಬಂದರೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ಕೊಡಲಾಗಿದೆ. ಹೀಗಿದ್ದರೂ ಅವರು ತಿಳಿಸಿರಲಿಲ್ಲ’ ಎಂದು ತಹಶೀಲ್ದಾರ್ ಬಿ.ಎಸ್. ಕೂಡಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅನ್ಯರ ಮೂಲಕ ಈ ವಿಷಯ ಗೊತ್ತಾಗಿದ್ದು, ಅವರನ್ನು ಠಾಣೆಗೆ ಕರೆದು ಮನೆ ಬಿಟ್ಟು ಎಲ್ಲಿಗೂ ಹೋಗದಂತೆ ತಿಳಿಸಲಾಗಿದೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಯಾರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಪಡೆದು ನಿಗಾ ವಹಿಸುವಂತೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದು ಹೇಳಿದರು.