ಹೊಸಪೇಟೆ: ಮೇ ತಿಂಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ನೂತನ ವಿಜಯನಗರ ಜಿಲ್ಲಾ ಘಟಕಕ್ಕೆ ಪ್ರತ್ಯೇಕವಾಗಿ ನಡೆಸಬೇಕು ಎಂದು ಪರಿಷತ್ತಿನ ತಾಲ್ಲೂಕು ಘಟಕ ಆಗ್ರಹಿಸಿದೆ.
ಈ ಸಂಬಂಧ ಪರಿಷತ್ತಿನ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಪರಿಷತ್ತಿನ ಚುನಾವಣೆ ಇದುವರೆಗೆ ಅಖಂಡ ಬಳ್ಳಾರಿ ಜಿಲ್ಲೆಗೆ ಅನ್ವಯವಾಗುವಂತೆ ನಡೆಸಿಕೊಂಡು ಬರಲಾಗಿದೆ. ಆದರೆ, ಈಗ ವಿಜಯನಗರ ಅದರಿಂದ ಪ್ರತ್ಯೇಕವಾಗಿದೆ. ನೂತನ ಜಿಲ್ಲೆಗೆ ಪ್ರತ್ಯೇಕವಾಗಿ ನಿಗದಿತ ದಿನಾಂಕದಂದೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
‘ಜಿಲ್ಲೆ ವಿಭಜನೆಗೊಂಡರೂ ಅಖಂಡ ಜಿಲ್ಲೆಗೆ ಅನ್ವಯವಾಗುವಂತೆ ಚುನಾವಣೆ ನಡೆಸಿದರೆ ಸಾಹಿತ್ತಿಕ, ಸಾಂಸ್ಕೃತಿಕವಾಗಿ ಪಶ್ಚಿಮ ತಾಲ್ಲೂಕುಗಳಿಗೆ ಹಿನ್ನಡೆ ಉಂಟಾಗುತ್ತದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಜಂಬುನಾಥ, ನಂದೀಶ್ವರ ದಂಡೆ, ವಿಶ್ವನಾಥ್, ಮಧುರಚೆನ್ನ ಶಾಸ್ತ್ರೀ ಹಿರೇಮಠ ಇದ್ದರು.