ಹೊಸಪೇಟೆ: ಸಮಾಜ ಸೇವಕಿ, ಜನನಿ ಮಹಿಳಾ ಸಬಲೀಕರಣ ಸಮಿತಿ ಸಂಸ್ಥಾಪಕ ಸದಸ್ಯೆ ಎಂ.ಕೆ. ಕೆರೋಲಿನ್ ಅವರ ಸ್ಮರಣಾರ್ಥ ಸಮಿತಿಯ ಕಾರ್ಯಕರ್ತೆಯರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.
ಕೋವಿಡ್ ಎರಡನೇ ಅಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಗ ಕೆರೋಲಿನ್ ಸಾವನ್ನಪ್ಪಿದ್ದರು. ಅವರ ನಿಧನಕ್ಕೆ ಒಂದು ವರ್ಷ ಆಗಿರುವುದರಿಂದ ಅವರ ಭಾವಚಿತ್ರದ ಎದುರು ಮೇಣದ ಬತ್ತಿ ಬೆಳಗಿಸಿ, ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ವಿವಿಧ ವಾರ್ಡ್ಗಳಿಗೆ ತೆರಳಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಹರಿಪ್ರಸಾದ್ ಚಾಲನೆ ನೀಡಿ, ಸಮಿತಿಯ ಜನಪರ ಕಾರ್ಯಗಳು ನಿಜಕ್ಕೂ ಪ್ರಶಂಸನೀಯ. ಕೆರೋಲಿನ್ ಅವರನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಬಡಜನರಿಗೆ ಸಹಾಯಕ್ಕಾಗಿ ಸದಾ ಮುಂದಿರುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೂ ಅವರ ಕೊಡುಗೆ ಸ್ಮರಣೀಯ ಎಂದರು.
ಸಮಿತಿ ಅಧ್ಯಕ್ಷೆ ಗೀತಾ ಶಂಕರ್, ಉಪಾಧ್ಯಕ್ಷೆ ರೋಫಿಯಾ, ಪ್ರಧಾನ ಕಾರ್ಯದರ್ಶಿ ಹುಲಿಗೆಮ್ಮ, ಕಾರ್ಯದರ್ಶಿ ಸ್ವಾತಿಸಿಂಗ್, ಖಜಾಂಚಿ ಶಾರದಾ ಕುಲಕರ್ಣಿ, ಸಹಕಾರ್ಯದರ್ಶಿ ಉಮಾ, ಸಂಚಾಲಕಿ ಶ್ರೀದೇವಿ, ನಾಗವೇಣಿ ಹಂಪಿ ಇದ್ದರು.