ಹೊಸಪೇಟೆ (ವಿಜಯನಗರ): ‘ವಿಜಯನಗರ ಸಂಸ್ಥಾಪಕರಾದ ಹಕ್ಕ ಬುಕ್ಕರು ವಾಲ್ಮೀಕಿ ಸಮಾಜದವರು. ಆದರೆ, ಕುರುಬ ಸಮಾಜದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಹೆಸರು ಬಳಸಿಕೊಂಡು ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಹರಿಹರದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಜಂಬಯ್ಯ ನಾಯಕ ಆರೋಪಿಸಿದರು.
‘ಹಕ್ಕ ಬುಕ್ಕರ ಸವಿನೆನಪಿನಲ್ಲಿ ಏ. 18ರಂದು ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಗುವುದು ಎಂದು ಕನಕ ಗುರುಪೀಠ ತಿಂಥಿಣಿ ಬ್ರಿಡ್ಜ್ ಪೀಠಾಧಿಪತಿ ಸಿದ್ದರಾಮನಂದಪುರಿ ಸ್ವಾಮೀಜಿ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ಈ ಸಂಬಂಧ ಏ. 5ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಬುಧವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹನ್ನೊಂದು ವರ್ಷಗಳ ಹಿಂದೆ ಮಾಜಿ ಸಂಸದ ವಿರೂಪಾಕ್ಷಪ್ಪ ಅವರು ಇದೇ ರೀತಿ ಸಭೆ ನಡೆಸಿ, ಹೇಳಿಕೆ ನೀಡಿದ್ದರು. ಆಗ ಕೂಡ ವಾಲ್ಮೀಕಿ ಸಮಾಜ ವಿರೋಧ ವ್ಯಕ್ತಪಡಿಸಿತ್ತು. ಈಗ ಪುನಃ ಕಾರ್ಯಕ್ರಮ ಸಂಘಟಿಸಲು ಮುಂದಾಗಿದ್ದಾರೆ. ಹಕ್ಕ ಬುಕ್ಕರು ವಾಲ್ಮೀಕಿ ಸಮುದಾಯದವರು ಎನ್ನುವುದಕ್ಕೆ ಪೂರಕ ದಾಖಲೆಗಳಿವೆ. ಈ ಕುರಿತು ಚರ್ಚೆಗೂ ಸಿದ್ದ. ಸಮಾಜದ ಪರವಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಕುರುಬ ಸಮುದಾಯದಿಂದ ಕನಕ ಗುರುಪೀಠದ ಸ್ವಾಮೀಜಿ ಚರ್ಚೆಗೆ ಬರಲಿ’ ಎಂದು ಆಗ್ರಹಿಸಿದರು.