ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗೆ 2 ಸಾವಿರ ವೈದ್ಯರ ನೇರ ನೇಮಕಾತಿ: ಆರೋಗ್ಯ ಸಚಿವ ಡಾ.ಸುಧಾಕರ್

ವಿಮ್ಸ್‌ನಲ್ಲಿ ಎಂಆರ್‌ಐ, ಗ್ರಂಥಾಲಯ, ವಸತಿ ನಿಲಯಗಳಿಗೆ ಶಂಕುಸ್ಥಾಪನೆ
Last Updated 30 ಮಾರ್ಚ್ 2021, 11:31 IST
ಅಕ್ಷರ ಗಾತ್ರ

ಬಳ್ಳಾರಿ: ‘2 ಸಾವಿರಕ್ಕೂ ಹೆಚ್ಚು ವೈದ್ಯರನ್ನು, 700ಕ್ಕೂ ಹೆಚ್ಚು ಪ್ಯಾರಾಮೆಡಿಕಲ್, ನರ್ಸಿಂಗ್ ಸಿಬ್ಬಂದಿಯನ್ನು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.

ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ಬಳಕೆಗೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‍ಐ), ಗ್ರಂಥಾಲಯ, ಉಪನ್ಯಾಸ ಸಭಾಂಗಣ ಮತ್ತು ಪರೀಕ್ಷಾ ಸಭಾಂಗಣ, ರಂಗಮಂದಿರ, ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ದಂತ ವೈದ್ಯಕೀಯ ಮಹಿಳಾ ವಿದ್ಯಾರ್ಥಿಗಳ ಹಾಸ್ಟಲ್‍ಗಳ ಶಂಕುಸ್ಥಾಪನೆಯನ್ನು ವರ್ಚುವಲ್ ತಂತ್ರಜ್ಞಾನದ ಮೂಲಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರವೇರಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಉತ್ತೇಜನ ನೀಡಲು ಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, ನಿರ್ದಿಷ್ಟ ಕಾನೂನುಗಳನ್ನು ಬದಲಾವಣೆ ಮಾಡಲಾಗುವುದು. ಖಾಸಗಿ - ಸರ್ಕಾರಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ಸಮಿತಿ ರಚಿಸಲಾಗಿದ್ದು,ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ’ ಎಂದರು.

ಈ ಹಿಂದೆ ಕಾರಾಗೃಹ ಕಟ್ಟಡವಾಗಿದ್ದ 173 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮ್ಸ್ ತಲೆ ಎತ್ತಿದೆ. ಗತವೈಭವವನ್ನು ಆರೋಗ್ಯಕ್ಷೇತ್ರದಲ್ಲಿ ಮರುಕಳಿಸುವ ನಿಟ್ಟಿನಲ್ಲಿ ವಿಮ್ಸ್ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಮ್ಸ್ ಕೇವಲ ನಮ್ಮ ರಾಜ್ಯದ ಜನರಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿಲ್ಲ; ಆಂಧ್ರಪ್ರದೇಶ ಮತ್ತು ತೆಲಂಗಾಣ ಜನರಿಗೂ ಚಿಕಿತ್ಸೆ ನೀಡುವ ಸಂಜೀವಿನಿಯಾಗಿದೆ ಎಂದರು.

ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ರಿಂದ 250ಕ್ಕೆ ಹೆಚ್ಚಿಸಿ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು. ಕಟ್ಟಡ ಕಾಮಗಾರಿಗಳು ಮತ್ತು ಉಪಕರಣಗಳನ್ನು ಅಳವಡಿಸಿಲು ಅನುಮೋದನೆ ನೀಡಲಾಗಿದೆ ಎಂದರು.

ಪ್ರಸ್ತುತ ವಿಮ್ಸ್ ಸಂಸ್ಥೆಯ ಅಧೀನದಲ್ಲಿರುವ ಆಸ್ಪತ್ರೆಗೆ ಪ್ರತಿದಿನ 2 ಸಾವಿರ ಹೊರರೋಗಿಗಳು ಮತ್ತು 500ರಿಂದ 800ರವರೆಗೆ ಒಳರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ. ಪ್ರಸ್ತುತ ಸಂಸ್ಥೆಯ ಲ್ಲಿ ಎಂಬಿಬಿಎಸ್ 150, ಬಿಡಿಎಸ್-50, ಸ್ನಾತಕೋತ್ತರ-120, ಸೂಪರ್ ಸ್ಪೆಷಾಲಿಟಿ -05, ಪ್ಯಾರಾ ಮೆಡಿಕಲ್ ಹಾಗೂ ಬಿಎಸ್‍ಸಿ ನರ್ಸಿಂಗ್ ಕೋರ್ಸ್ ಗೆ-130 ವಿದ್ಯಾರ್ಥಿಗಳು ದಾಖಲಾಗಿ ಅಧ್ಯಯನ ನಡೆಸಿದ್ದಾರೆ ಎಂದರು.

‘ಸಚಿವ ಆನಂದಸಿಂಗ್ ನೇತೃತ್ವದಲ್ಲಿ ಹೊಸ ಜಿಲ್ಲೆ ಅಭಿವೃದ್ಧಿ’
‘ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅತ್ಯಂತ ಕ್ರಿಯಾಶೀಲರು. ಅವರ ನೇತ್ವತ್ವದಲ್ಲಿ 31ನೇ ಜಿಲ್ಲೆ ವಿಜಯನಗರ ಉದಯಿಸಿದೆ. ಈ ಹೊಸ ಜಿಲ್ಲೆ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಲಿದೆ’ ಎಂಬ ಆಶಾಭಾವನೆಯನ್ನು ಸಚಿವ ಡಾ.ಸುಧಾಕರ್ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಜಿಲ್ಲಾ ಖನಿಜ ನಿಧಿ ಅಡಿ ಬಹಳಷ್ಟು ಅನುದಾನವನ್ನು ಸಚಿವರು ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನೀಡಬೇಕು’ ಎಂದು ಮನವಿ ಮಾಡಿದರು.

‘ಸ್ವಾಯತ್ತ ಸಂಸ್ಥೆಯಾಗಿರುವ ವಿಮ್ಸ್‌ನಲ್ಲಿ ಇದುವರೆಗೆ ಜಿಲ್ಲಾಧಿಕಾರಿ ಪ್ರಗತಿ ಪರಿಶೀಲನೆ ನಡೆಸುತ್ತಿರಲಿಲ್ಲ; ಅವರನ್ನು ಈಗ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರು ಇನ್ನು ಮಕ್ಷೇತ್ರಕ್ಕೆ ಪರಿಶೀಲಿಸಲಿದ್ದಾರೆ’ ಎಂದರು.

ರಾಜ್ಯದಲ್ಲಿ ಪ್ರತಿದಿನ 3ಲಕ್ಷ ಲಸಿಕೆ ನೀಡಬಹುದು. ಹೀಗಾಗಿ ಯುವಜನರು ಮನೆಯಲ್ಲಿರುವ ಹಿರಿಯರನ್ನು ಲಸಿಕಾ ಕೇಂದ್ರಕ್ಕೆ ಕರೆತರುವ ಕೆಲಸ ಮಾಡಬೇಕು ಎಂದರು.

ಕೋವಿಡ್ 2ನೇ ಅಲೆ; ಹೆಚ್ಚಿನ ನಿಗಾವಹಿಸಿ: ‘ಈಗಾಗಲೇ ಕೋವಿಡ್ 2ನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆ ಬಳ್ಳಾರಿ ಗಡಿಜಿಲ್ಲೆಯಾಗಿರುವುದರಿಂದ ಜಿಲ್ಲಾಡಳಿತ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಸೂಚಿಸಿದರು.

ಕರ್ಫ್ಯೂ ಅನ್ನು ಹೇರುವುದಕ್ಕಿಂತಲೂ ನಾವೇ ವಿಧಿಸಿಕೊಳ್ಳುವುದರಿಂದ ಮಾತ್ರ 2ನೇ ಅಲೆ ತಡೆಯಲು ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಮಾತನಾಡಿ, 'ವಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಕೊಠಡಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಸಚಿವ ಸಂಪುಟದ ಅನುಮೋದನೆ ದೊರಕಿದೆ' ಎಂದರು.

ಹರಪನಳ್ಳಿ ಶಾಸಕ ಕರುಣಾಕರರೆಡ್ಡಿ ಮಾತನಾಡಿದರು. ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT