ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ಅಂಗಡಿಗಳ ಮೇಲೆ ದಾಳಿ: ಐವರು ಮಾಲೀಕರ ವಿರುದ್ಧ ಪ್ರಕರಣ

‘ಪ್ರಜಾವಾಣಿ’ ವರದಿ ಫಲಶ್ರುತಿ
Last Updated 20 ಏಪ್ರಿಲ್ 2020, 10:53 IST
ಅಕ್ಷರ ಗಾತ್ರ

ಹೊಸಪೇಟೆ: ಮಾರುಕಟ್ಟೆ ಬೆಲೆಗಿಂತ ಅಧಿಕ ದರಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಗರದ ಐದು ಕಿರಾಣಿ ಮಳಿಗೆಗಳ ಮೇಲೆ ಸೋಮವಾರ ದಾಳಿ ನಡೆಸಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದುಬಾರಿ ಬೆಲೆಗೆ ದಿನಸಿ ಮಾರಾಟ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ನಗರದ ಕಿರಾಣಿ ಮಳಿಗೆಗಳ ಮೇಲೆ ದಾಳಿ ನಡೆಸಿ, ಕ್ರಮ ಕೈಗೊಂಡಿದ್ದಾರೆ.

ನಗರದ ಮೂರಂಗಡಿ ವೃತ್ತದ ದೇವಿನಾರಾಯಣಿ ಕಿರಾಣಿ ಅಂಗಡಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಎದುರಿನ ಬಾಲಾಜಿ ಬಜಾರ್‌, ನಗರ ಠಾಣೆ ಬಳಿಯ ಲಕ್ಷ್ಮಿನಾರಾಯಣ ಜನರಲ್‌ ಸ್ಟೋರ್ಸ್‌, ಮೇನ್‌ ಬಜಾರ್‌ನ ಜನಾದ್ರಿ ರಾಮಚಂದ್ರಪ್ಪ ಮತ್ತು ಸನ್ಸ್‌ ಹಾಗೂ ಪಟೇಲ್‌ ನಗರದ ಶಿರಡಿ ಸಾಯಿ ಬಜಾರ್‌ ಮಳಿಗೆ ಮಾಲೀಕರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, ‘ಅಧಿಕ ಬೆಲೆಗೆ ದಿನಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಷಯ ‘ಪ್ರಜಾವಾಣಿ’ಯಲ್ಲಿ ಓದಿದೆ. ಈ ಸಂಬಂಧ ತಹಶೀಲ್ದಾರ್‌ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಅವರು ಗ್ರಾಹಕರ ಸೋಗಿನಲ್ಲಿ ಕಿರಾಣಿ ಮಳಿಗೆಗಳಿಗೆ ಹೋಗಿ, ದರ ಕೇಳಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಶೇ 30ರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಖಾತ್ರಿಯಾದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ಯಾವುದಾದರೂ ವಸ್ತುಗಳ ದಾಸ್ತಾನು ಇರದಿದ್ದರೆ ₹4ರಿಂದ ₹5 ಹೆಚ್ಚಿಗೆ ಪಡೆಯಲಿ. ಅದು ಬಿಟ್ಟು ₹30ರಿಂದ ₹40 ಹೆಚ್ಚಿಗೆ ಪಡೆದರೆ ಸುಮ್ಮನಿರಲ್ಲ. ಲಾಕ್‌ಡೌನ್‌ ವೇಳೆಯಲ್ಲಿ ಯಾರಾದರೂ ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ ಅದು ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಸಾರ್ವಜನಿಕರು ದೂರು ಕೊಟ್ಟರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7ರಿಂದ 11ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ವೇಳೆ ಕೆಲವರು ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದಾರೆ. ಅಂತಹವರ ವಿರುದ್ಧವೂ ಮಂಗಳವಾರದಿಂದ ಕ್ರಮ ಜರುಗಿಸಲಾಗುವುದು. ಅನುಮತಿಯಿಲ್ಲದೆ ಬಾಗಿಲು ತೆರೆದಿದ್ದ ನಗರದ ಎಲೆಕ್ಟ್ರಿಕ್‌, ಹಾರ್ಡ್‌ವೇರ್‌ ಮಳಿಗೆ ಮಾಲೀಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ನಗರದಲ್ಲಿ ಏ. 17ರಂದು ಮತ್ತೆ ಏಳು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಏ. 22ರ ವರೆಗೆ ಈಗಿರುವ ನಿಯಮಗಳೇ ಚಾಲ್ತಿಯಲ್ಲಿರುತ್ತವೆ. ಅಂದು ರಾಜ್ಯ ಸರ್ಕಾರ ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಲಿದ್ದು, ಅವುಗಳನ್ನು ನೋಡಿಕೊಂಡು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ನಿಯಮಗಳನ್ನು ಪರಿಷ್ಕರಿಸಲಾಗುವುದು’ ಎಂದು ಹೇಳಿದರು. ಡಿವೈಎಸ್ಪಿ ವಿ. ರಘುಕುಮಾರ ಇದ್ದರು.

‘ಖಾಸಗಿಯವರು ಆಹಾರ ಧಾನ್ಯ ವಿತರಿಸುವಂತಿಲ್ಲ’
‘ನಗರದಲ್ಲಿ ಇನ್ಮುಂದೆ ಖಾಸಗಿಯವರಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಿಸಲು ಅವಕಾಶ ಕಲ್ಪಿಸುವುದಿಲ್ಲ’ ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದರು.

‘ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಬೆಂಬಲಿಗರು ಏ. 18ರಂದು ನಗರದಲ್ಲಿ ‘ಆಹಾರಾನಂದ’ ಕಿಟ್‌ ಹಂಚುವಾಗ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ರೀತಿಯ ಘಟನೆಗಳು ಮರುಕಳಿಸದಿರಲೆಂದು ಖಾಸಗಿಯವರಿಗೆ ಆಹಾರ ಧಾನ್ಯ ಹಂಚುವುದಕ್ಕೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ಶೇ 96ರಷ್ಟು ಜನರಿಗೆ ಪಡಿತರ ವಿತರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT