ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಕಲಾ ಗ್ಯಾಲರಿ, ವಸ್ತು ಸಂಗ್ರಹಾಲಯ ಮತ್ತು ಡಿಜಿಟಲ್ ಲ್ಯಾಬ್ ಅನ್ನು ಕುಲಪತಿ ಪ್ರೊ. ಸ.ಚಿ. ರಮೇಶ ಉದ್ಘಾಟಿಸಿದರು.
ಬಳಿಕ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಮನುಷ್ಯ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾನೆ. ತನ್ನ ಜೀವನದ ಒತ್ತಡಗಳಿಂದ ನೆಮ್ಮದಿ ಪಡೆಯಲು ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಂಗೀತ, ಚಿತ್ರಕಲೆ ಹಾಗೂ ಶಿಲ್ಪ ಕಲಾಕೃತಿಗಳು ಆರೋಗ್ಯದ ಮನೆ ಮದ್ದಾಗಿವೆ. ಅಂತಹ ಕಲಾಕೃತಿಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಸಿಗುವುದರಲ್ಲಿ ಎರಡು ಮಾತಿಲ್ಲ’ ಎಂದರು.
‘ವಿಶ್ವವಿದ್ಯಾಲಯವು ಸಾಂಸ್ಕೃತಿಕ ದತ್ತು ಗ್ರಾಮಗಳ ಯೋಜನೆ ಮೂಲಕ ಅನೇಕ ಗ್ರಾಮಗಳನ್ನು ದತ್ತು ಪಡೆದಿದೆ. ಅಂತಹ ಗ್ರಾಮಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಅಲ್ಲಿರುವ ಸಾರ್ವಜನಿಕ ಸ್ಥಳಗಳ ಖಾಲಿ ಗೋಡೆಗಳ ಮೇಲೆ ಸ್ವಚ್ಛತೆ, ಆರೋಗ್ಯ, ಕಲೆ ಮತ್ತು ಸಂಸ್ಕೃತಿ ಹಾಗೂ ಸಾಮಾಜಿಕ ಪೀಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಚಿತ್ರಕಲೆ, ಕಲಾಕೃತಿಗಳ ಪ್ರದರ್ಶನ ಮಾಡಬೇಕು’ ಎಂದು ತಿಳಿಸಿದರು.
ಲಲಿತ ಕಲೆಗಳ ನಿಕಾಯದ ಡೀನ್ ಕೆ. ರವೀಂದ್ರನಾಥ, ‘ಒಬ್ಬ ಸಂಶೋಧಕನು ತನ್ನ ಸಂಶೋಧನೆಯಲ್ಲಿ ಸೌಂದರ್ಯ ಪ್ರಜ್ಞೆ ಹಾಗೂ ಪ್ರಯೋಜನ ಪ್ರಜ್ಞೆಯನ್ನು ಹೊಂದಿರಬೇಕು’ ಎಂದು ಹೇಳಿದರು.
ಕುಲಸಚಿವ ಎ. ಸುಬ್ಬಣ್ಣ ರೈ, ಪ್ರಾಧ್ಯಾಪಕರಾದ ಕೆ.ಎಂ. ಮೇತ್ರಿ, ಎಚ್.ಎನ್. ಕೃಷ್ಣೇಗೌಡ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನರಾವ್ ಬಿ. ಪಂಚಾಳ, ಎಂ.ಫಿಲ್. ವಿದ್ಯಾರ್ಥಿನಿ ಬಿ. ನಯನ, ಸಂಶೋಧನಾ ವಿದ್ಯಾರ್ಥಿ ರವಿ ಇದ್ದರು.