ಬಳ್ಳಾರಿ: ‘ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೂ ಮುಂದಿನ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಉದ್ಯಮಿ ಎಸ್.ಕೆ ಮೋದಿ ದಾನವಾಗಿ ನೀಡಿರುವ ನ್ಯಾಷನಲ್ ಸ್ಕೂಲ್ ಮತ್ತು ಕಿಂಡರ್ ಗಾರ್ಟನ್ ಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
‘ನಂಜನಗೂಡು ಮತ್ತು ಚಾಮರಾಜನಗರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಂದಿನ ಚುನಾವಣೆಯಲ್ಲಿ ಅದಕ್ಕೆ ಸೋಲಾಯಿತು. ಹಾನಗಲ್ ಬಿಜೆಪಿ ಕ್ಷೇತ್ರ, ಸಿಂದಗಿ ಜೆಡಿಎಸ್ ಗೆದ್ದಿರುವ ಕ್ಷೇತ್ರ. ಇವೆರಡೂ ಕಡೆ ಬಿಜೆಪಿ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ’ ಎಂದು ಮುಖ್ಯಮಂತ್ರಿ ಭವಿಷ್ಯ ನುಡಿದರು.
‘ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುವುದೋ ಆ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುತ್ತದೆ. ನಮ್ಮದು ಬೂತ್ ಮಟ್ಟದಿಂದ ಹಿಡಿದು ಕೇಂದ್ರ ಮಟ್ಟದವರೆಗೂ ಶಿಸ್ತಿನ ಪಕ್ಷ. ನಾವು ಮಾಡುವ ತೀರ್ಮಾನಕ್ಕೆ ಪಕ್ಷದ ಕಾರ್ಯಕರ್ತರು, ನಾಯಕರು ಬದ್ಧರಾಗಿ, ಒಟ್ಟಾಗಿ ಕೆಲಸ ಮಾಡುತ್ತಾರೆ’ ಎಂದರು.