ಕುರುಗೋಡು(ಬಳ್ಳಾರಿ ಜಿಲ್ಲೆ): ಚಮ್ಮಾರ ವೃತ್ತಿಯಿಂದ ಬದುಕು ಕಟ್ಟಿಕೊಂಡಿರುವ ಜಿ.ಮಂಜುನಾಥ ಅವರು ಕುರುಗೋಡು ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಪಾದರಕ್ಷೆಗಳ ಮಾರಾಟದ ಅಂಗಡಿ ತೆರೆದಿರುವ ಅವರು ಇಲ್ಲಿನ 1ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 254 ಮತಗಳನ್ನು ಪಡೆದಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕರಿದೊಡ್ಡಪ್ಪ (158) ಅವರನ್ನು 96 ಮತಗಳ ಅಂತರದಿಂದ ಪರಾಭವಗೊಳಿಸಿದರು.
‘22ನೇ ವಾರ್ಡ್ನಲ್ಲಿ ವಾಸವಿದ್ದರೂ ನಾನು ಗೆಲುವು ಸಾಧಿಸಿದ್ದು 1ನೇ ವಾರ್ಡ್ನಲ್ಲಿ. ಇಲ್ಲಿಯ ಸ್ನೇಹಿತರು ಹಿತೈಶಿಗಳು ಗೆಲುವಿಗೆ ಶ್ರಮಿಸಿದ್ದಾರೆ. ಶಾಸಕ ಜೆ.ಎನ್. ಗಣೇಶ್ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಬೆಂಬಲಿಸಿದರು’ ಎನ್ನುತ್ತಾರೆ ಅವರು.