ಹೊಸಪೇಟೆ: ಕೊರೊನಾ ಲಾಕ್ಡೌನ್ನಿಂದ ಭಾನುವಾರ ನಗರದಲ್ಲಿ ಸಂಪೂರ್ಣ ಮೌನ ಆವರಿಸಿಕೊಂಡಿತು. ಜನ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಉಳಿದುಕೊಂಡಿದ್ದರಿಂದ ನಗರ ಸ್ತಬ್ಧಗೊಂಡಿದ್ದು, ಭಾನುವಾರದ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ನಗರದ ರೋಟರಿ ವೃತ್ತ, ರಾಮ ಟಾಕೀಸ್, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ವಾಲ್ಮೀಕಿ ವೃತ್ತ, ಸಾಯಿಬಾಬಾ ವೃತ್ತ, ಎ.ಪಿ.ಎಂ.ಸಿ. ವೃತ್ತ, ಟಿ.ಬಿ. ಡ್ಯಾಂ ವೃತ್ತದಲ್ಲಿ ಪೊಲೀಸರನ್ನು ಹೊರತುಪಡಿಸಿದರೆ ಮತ್ಯಾರೂ ಇರಲಿಲ್ಲ.
ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದ್ವಿಚಕ್ರ ವಾಹನ, ಜೀಪುಗಳಲ್ಲಿ ಪೊಲೀಸರು ಎಲ್ಲೆಡೆ ಗಸ್ತು ತಿರುಗುತ್ತಿದ್ದಾರೆ. ಅನಗತ್ಯ ಹೊರಗೆ ಓಡಾಡುತ್ತಿರುವವರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ. ವಾಹನಗಳಲ್ಲಿ ತಿರುಗಾಡುವವರನ್ನು ತಡೆದು ದಂಡ ಹಾಕುತ್ತಿದ್ದಾರೆ.
ಶನಿವಾರ ರಾತ್ರಿ ಎಂಟು ಗಂಟೆಗೆ ಬಾಗಿಲು ಮುಚ್ಚಿದ್ದ ಮಳಿಗೆಗಳು ಭಾನುವಾರ ಬೆಳಿಗ್ಗೆಯೂ ಬಾಗಿಲು ತೆರೆಯಲಿಲ್ಲ. ಸಾರಿಗೆ ಸಂಸ್ಥೆ ಬಸ್ಸುಗಳು, ಆಟೊ ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆ ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ತುರ್ತು ಸೇವೆಗಳಾದ ಆಸ್ಪತ್ರೆ, ಕ್ಲಿನಿಕ್, ಔಷಧ ಮಳಿಗೆ, ಪೆಟ್ರೋಲ್ ಬಂಕ್ ಎಂದಿನಂತೆ ತೆರೆದಿದ್ದವು.