ಕಮಲಾಪುರ: ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ಶುಕ್ರವಾರ, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸಹೋದರರಿಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಆರೋಪಿ ಚಂದ್ರು ಕಮಲಾಕರ ಮಾಂಗ (25) ಎಂಬುವನನ್ನುಬಂಧಿಸುವಲ್ಲಿ ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದ ಮಹಾಗಾಂವ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.
ಜ.15ರಂದು ಬೆಳಿಗ್ಗೆ ತಡಕಲ್ ಗ್ರಾಮದ ನೀಲೇಶ ಅಯನರಾವ ಮೋರೆ (34) ಹಾಗೂ ಅವರ ಸಹೋದರ ರಾಜು (ರಾಜಶೇಖರ) ಅಯನರಾವ ಮೋರೆ (25) ಎಂಬುವವರನ್ನು ಚಂದ್ರು ಕೊಲೆ ಮಾಡಿ, ಪರಾರಿಯಾಗಿದ್ದ.
‘ಕೊಲೆ ಆರೋಪಿ ತನ್ನ ಬುಲೆಟ್ ಬೈಕ್ ಮೇಲೆ ತೆರಳಿದ ಮಾಹಿತಿ ಇತ್ತು. ಆ ಬೈಕ್ ಕಪನೂರ ಸಮೀಪದ ಸೇತುವೆ ಬಳಿ ಪತ್ತೆಯಾಯಿತು. ಆಗ ಈತ ಕಲಬುರ್ಗಿ ಕಡೆ ತೆರಳಿದ್ದಾನೆಂದು ಖಚಿತಪಡಿಸಿಕೊಂಡೆವು. ಅಷ್ಟರಲ್ಲಾಗಲೇ ಸಂಬಂಧಿಕರನ್ನು ಕರೆತಂದು ಒಂದೆಡೆ ವಿಚಾರಣೆ ಮುಂದುವರೆಸಿದ್ದೆವು. ಕಲಬುರ್ಗಿಯ ಇಂದಿರಾನಗರ, ಶಕ್ತಿನಗರ ಹುಡುಗರ ಜೊತೆ ಇರುತ್ತಾನೆ. ಬಸ್ ನಿಲ್ದಾಣ ಏರಿಯಾ, ಕಣ್ಣಿ ಮಾರ್ಕೆಟ್ ಕಡೆ ಅಡ್ಡಾಡುತ್ತಿರುತ್ತಾನೆಂಬ ಮಾಹಿತಿ ಸಿಕ್ಕಿತು. ರಾತ್ರಿ ಹುಡುಕಾಡಿದೆವು. ಬೆಳಿಗ್ಗೆ 6ರ ಸುಮಾರಿಗೆ ಕಣ್ಣಿ ಮಾರ್ಕೆಟ್ನ ಮುಳ್ಳು ಕಂಟಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ಅವಿತು ಕುಳಿತಂತೆ ಕಾಣಿಸಿತು. ಹೋಗಿ ನೋಡಿದಾಗ ಆರೋಪಿ ಚಂದ್ರು ಸಿಕ್ಕಿಬಿದ್ದ. ಆತನನ್ನು ಬಂಧಿಸಿ ಗ್ರಾಮೀಣ ಸಿಪಿಐ ವೃತ್ತಕ್ಕೆ ಕರೆತಂದೆವು’ ಎಂದು ಸಿಪಿಐ ಶಂಕರಗೌಡತಿಳಿಸಿದರು.
ಕೊಲೆ ಮಾಡಿದ ಬಳಿಕ ಕೊಲೆಗೆ ಬಳಸಿದ ಮಾರಕಾಸ್ತ್ರ, ರಕ್ತದ ಕಲೆಗಳಿದ್ದ ಟಿ–ಷರ್ಟ್ಅನ್ನು ತನ್ನ ಮನೆ ಹಿಂದಿನ ಹಾಳುಬಿದ್ದ ಶೌಚಾಲಯದಲ್ಲಿ ಬಚ್ಚಿಟ್ಟಿದ್ದ. ಬುಲೆಟ್ ಬೈಕ್, ಕೊಲೆಗೆ ಬಳಸಿದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಪಿಎಸ್ಐ ಪುಷ್ಪಾ, ಸಿಬ್ಬಂದಿ ಕುಪೇಂದ್ರ, ಅಶೋಕ, ರಾಜೇಂದ್ರ ರೆಡ್ಡಿ, ಮಸ್ತಾನ, ಅರುಣ ಭಾಗವಹಿಸಿದ್ದರು.