ಬಳ್ಳಾರಿ: ಸರ್ಕಾರಿ ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.
‘ಕಾಲೇಜುಗಳಲ್ಲಿ ಹೆಚ್ಚುವರಿ ಶೌಚಾಲಯ ಮತ್ತು ಕೊಠಡಿಗಳನ್ನು ನಿರ್ಮಿಸಬೇಕು, ಅಧ್ಯಾಪಕರ ಕೊರತೆಯನ್ನು ನೀಗಿಸಬೇಕು. ಮಹಿಳಾ ಕಾಲೇಜು ಬಳಿ ಪೊಲೀಸರನ್ನು ನಿಯೋಜಿಸಿ ರಕ್ಷಣೆ ಕೊಡಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತರೆಡ್ಡಿ ಆಗ್ರಹಿಸಿದರು.
‘ಬಿ.ಇಡಿ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲದಿದ್ದರೂ ಹೆಚ್ಚು ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ನಗರ ಮತ್ತು ಗ್ರಾಮಾಂತರ ಸಾರಿಗೆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
‘ವಿದ್ಯಾರ್ಥಿನಿಯರ ಹಾಸ್ಟೆಲ್ಗಳಿಗೆ ರಕ್ಷಣೆ ನೀಡಬೇಕು, ನಿಲಯಪಾಲಕರನ್ನು ನೇಮಕ ಮಾಡಬೇಕು. ಹಾಸಿಗೆಗಳನ್ನು ಪೂರೈಸಬೇಕು. ಮಹಿಳಾ ಕಾಲೇಜಿನ ಮುಂದೆ ವಾಹನಗಳ ನಿಲುಗಡೆಯನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
‘ತಿಲಕ್ ನಗರದ ನರ್ಸಿಂಗ್ ವಸತಿ ನಿಲಯದಿಂದ ವಿಮ್ಸ್ ಆಸ್ಪತ್ರೆಗೆ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವವರಿಗೆ ಬಸ್ ಸೌಕರ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟಕರಾದ ಎಂ.ಮಜುನಾಥ, ಮನೋಜ್, ವೀರೇಶ್, ಕಿರಣ್, ವನಜಾಕ್ಷಿ, ದೀಪಾ, ಸೌಂದರ್ಯ ನೇತೃತ್ವ ವಹಿಸಿದ್ದರು,