ಹೊಸಪೇಟೆ: ‘ಯಾವುದೇ ವಿಷಯವಿರಲಿ ಅದನ್ನು ಒಂದು ದೃಷ್ಟಿಕೋನದಿಂದ ನೋಡದೆ ಹಲವು ಆಯಾಮಗಳಲ್ಲಿ ನೋಡಿ ಅದನ್ನು ವಿಶ್ಲೇಷಿಸುವ ಜಾಣ್ಮೆ, ವಿಶಿಷ್ಟ ವ್ಯಕ್ತಿತ್ವ ಡಾ.ಎ.ಕೆ. ರಾಮಾನುಜನ್ ಅವರದಾಗಿತ್ತು’ ಎಂದು ಡಾ.ಅಮರಕುಮಾರ್ ತಿಳಿಸಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ‘ಡಾ.ಎ.ಕೆ.ರಾಮಾನುಜನ್ ಅವರ ವ್ಯಕ್ತಿತ್ವ ಮತ್ತು ಚಿಂತನೆ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಯಾವುದೇ ವಿಷಯವಿರಲಿ ಅದನ್ನು ತರ್ಕಬದ್ಧವಾಗಿ ಚಿಂತಿಸುವ ಮನೋಭಾವ ಅವರಲ್ಲಿತ್ತು’ ಎಂದರು.
‘ಒಬ್ಬ ವ್ಯಕ್ತಿ ಪರಿಪೂರ್ಣವಾಗಬೇಕಾದರೆ ಸಾಹಿತ್ಯ, ಇತಿಹಾಸ, ಚರಿತ್ರೆ ಹಾಗೂ ಸಂಗೀತ ಇತರೆ ವಿಚಾರಗಳನ್ನು ಅಧ್ಯಯನ ಮಾಡಿ ಅವುಗಳನ್ನು ಬೇರೆ ಬೇರೆ ಆಯಾಮಗಳಿಂದ ಆಲೋಚಿಸುವ ಮೂಲಕ ಉತ್ತಮ ವ್ಯಕ್ತಿಯಾಗಲು ಸಾಧ್ಯ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ, ‘ಭಾರತದ ಚಿಂತನೆಗಳನ್ನು ಅಪಾರವಾಗಿ ಪ್ರೀತಿಸಿದ ಡಾ.ಎ.ಕೆ.ರಾಮಾನುಜನ್ ಅವರು ನಮ್ಮ ಕಾಲಕ್ಕೆ ಒಂದು ಮಾದರಿಯಾಗಿದ್ದಾರೆ’ ಎಂದರು.
ಪ್ರಾಧ್ಯಾಪಕರಾದ ರಹಮತ್ ತರೀಕೆರೆ, ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ವಣೇನೂರು, ಯರಿಸ್ವಾಮಿ ಇದ್ದರು.