ಹೂವಿನಹಡಗಲಿ: ತಾಲ್ಲೂಕಿನ ತುಂಬಿನಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
‘ತುಂಬಿನಕೇರಿ ಅರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿಗಳು ಎರಡು ಶ್ರೀಗಂಧದ ಮರಗಳನ್ನು ಕಡಿದು, 10 ಕೆ.ಜಿ. ತೂಕದ 30 ತುಂಡುಗಳನ್ನು ಸಾಗಿಸಲು ತಯಾರಿ ನಡೆಸಿದ್ದರು. ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದೆವು. ಕೃತ್ಯಕ್ಕೆ ಬಳಸಿದ ಕೊಡಲಿ, ಗುದ್ದಲಿ, ಕಂದಲಿ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ಕಲ್ಲಮ್ಮನವರ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿದ್ದರಾಮಪ್ಪ ಚಳಕಾಪುರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ಮೋಹನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಡಿ.ವೈ.ಸಾಗರ್, ಸಿಬ್ಬಂದಿ ದುಷ್ಯಂತಗೌಡ, ಚಂದ್ರನಾಯ್ಕ, ಸಂತೋಷ ಹಾವನೂರ ಭಾಗವಹಿಸಿದ್ದರು.