ಹೊಸಪೇಟೆ: ಇಲ್ಲಿನ ಸರ್ದಾರ್ ಪಟೇಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ವಿಜ್ಞಾನ ಹಬ್ಬ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ನಗರದ ವಡಕರಾಯ ದೇವಸ್ಥಾನದಿಂದ ಪ್ರಮುಖ ಮಾರ್ಗಗಳ ಮೂಲಕ ಶಾಲೆಯ ವರೆಗೆ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಕಾಗದದಿಂದ ತಯಾರಿಸಿದ ಕಿರೀಟಗಳನ್ನು ಧರಿಸಿಕೊಂಡು ಹೆಜ್ಜೆ ಹಾಕಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ ಮಾತನಾಡಿ, ‘ಮಕ್ಕಳಲ್ಲಿ ವಿಜ್ಞಾನದ ಕಲಿಕೆ ಆಸಕ್ತಿ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಮುದಾಯ ಒಳಗೊಳ್ಳಬೇಕು. ಆಗ ಅದಕ್ಕೆ ಹೆಚ್ಚಿನ ಅರ್ಥ ಬರುತ್ತದೆ’ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಗುರುರಾಜ ಮಾತನಾಡಿ, ‘ಸಹಕಾರ, ಸೌಹಾರ್ದ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳ ಪ್ರತಿಭೆ ಒರೆಗೆ ಹಚ್ಚಲು ಇದೊಂದು ಉತ್ತಮ ವೇದಿಕೆ’ ಎಂದು ತಿಳಿಸಿದರು. ಬಳಿಕ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು