ಹೊಸಪೇಟೆ: ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ‘ಸ್ಲಂ ಜನಾಂದೋಲನ ಕರ್ನಾಟಕ’ ಸಂಘಟನೆಯವರು ಸೋಮವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ವಸತಿ ಇಲಾಖೆಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು.
‘ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವುದರ ಕುರಿತು ಈಗಾಗಲೇ ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದಷ್ಟು ಶೀಘ್ರ ಅದನ್ನು ಜಾರಿಗೆ ತರಬೇಕು. 30 ವರ್ಷಕ್ಕೂ ಹೆಚ್ಚು ಅವಧಿಯಿಂದ ಕೊಳೆಗೇರಿಗಳಲ್ಲಿ ಬದುಕುತ್ತಿರುವವರಿಗೆ ಯಾವುದೇ ಷರತ್ತು ಹಾಕದೆ ಹಕ್ಕು ಪತ್ರ ಕೊಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳೆಗೇರಿಗಳನ್ನು, ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಿ, ಮಂಡಳಿಯೇ ಹಕ್ಕು ಪತ್ರ ವಿತರಿಸಬೇಕು. ಮನೆ ನಿರ್ಮಿಸಿಕೊಳ್ಳಲು ₹6 ಲಕ್ಷದ ವರೆಗೆ ಸಬ್ಸಿಡಿ ಕೊಡಬೇಕು. ವಾಣಿಜ್ಯ ಬ್ಯಾಂಕುಗಳಿಂದ ಮನೆ ಕಟ್ಟಿಕೊಳ್ಳಲು ಸಾಲ ಕೊಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.
ಸಂಘಟನೆಯ ವೆಂಕಮ್ಮ, ದೇವಮ್ಮ, ತಾಯಮ್ಮ, ನಾಗಮ್ಮ, ಗೌರಮ್ಮ, ಶಹರಬಾನು, ರಿಹಾನ್ ಇದ್ದರು.