ಹೊಸಪೇಟೆ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ನಿರ್ವಾಣೆ ಮಠದ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಜಡೆಸಿದ್ದೇಶ್ವರ ಸದ್ಭಕ್ತ ಮಂಡಳಿ, ಶನೇಶ್ವರ ದೇವಸ್ಥಾನ ಮಂಡಳಿಯವರು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದಿರುವ ಮನವಿ ಪತ್ರವನ್ನು ಬುಧವಾರ ಇಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿ, ಒತ್ತಾಯಿಸಿದ್ದಾರೆ
ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಸ್ವಾಮೀಜಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಹತ್ಯೆ ಮಾಡಿರುವುದು ತೀವ್ರ ಖಂಡನಾರ್ಹ. ಸ್ವಾಮೀಜಿ ಹತ್ಯೆಯಿಂದ ಅವರ ಅನುಯಾಯಿಗಳು ದುಃಖತಪ್ತರಾಗಿದ್ದಾರೆ. ಆತಂಕಕ್ಕೂ ಒಳಗಾಗಿದ್ದಾರೆ. ಸಿಬಿಐನಿಂದ ಹೆಚ್ಚಿನ ತನಿಖೆ ನಡೆಸಿ, ಹತ್ಯೆಗೆ ನಿಖರ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಎಲ್ಲ ಸಾಧು ಸಂತರ ಮಠ ಮಾನ್ಯಗಳಿಗೆ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜಡೆಸಿದ್ದೇಶ್ವರ ಸದ್ಭಕ್ತ ಮಂಡಳಿಯ ಎಚ್.ಎಂ. ಷಡಕ್ಷರಯ್ಯ, ಶನೇಶ್ವರ ದೇವಸ್ಥಾನ ಮಂಡಳಿಯ ಎಚ್.ಎಂ. ಮೃತ್ಯುಂಜಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಜಡೆಪ್ಪ, ಮುಖಂಡರಾದ ಜಿ.ಎಚ್. ಶೆಟ್ಟಿ, ಡಿ.ಎಂ. ಮೃತ್ಯುಂಜಯ ಸ್ವಾಮಿ, ಎಚ್. ಜಂಬುನಾಥ, ಕೆ.ವಿ. ರವಿಕುಮಾರ, ಆರ್. ಚಿದಾನಂದ, ಎನ್. ವೆಂಕಟೇಶ ಇದ್ದರು.