ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ರಾಜಪ್ಪ, ಪಾಲಯ್ಯ, ನೀಲಮ್ಮ ಪಂಚಪ್ಪ, ಶಾರದಮ್ಮ, ಲಚ್ಚಿಬಾಯಿ, ಮಲ್ಲೆ ಹನುಮಕ್ಕ ಮಾತನಾಡಿ, ‘ಜನವರಿ ಒಂದರಿಂದಲೇ ಶಾಲಾ, ಕಾಲೇಜುಗಳು ಆರಂಭವಾಗಿವೆ. ಆದರೆ, ತಾಲ್ಲೂಕಿನ ಹಲವು ಗ್ರಾಮಗಳಿಗೆ ಬಸ್ ಸಂಚಾರ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗುತ್ತಿದೆ’ ಎಂದರು.
‘ಅನೇಕ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಬಂದು ಹೋಗುತ್ತಿದ್ದಾರೆ. ಕೆಲವೆಡೆ ಆ ಸೌಕರ್ಯವೂ ಇಲ್ಲದ್ದರಿಂದ ಶಾಲಾ, ಕಾಲೇಜಿನಿಂದ ವಂಚಿತರಾಗುತ್ತಿದ್ದಾರೆ. ಬಸ್ ಆರಂಭಿಸಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಗಮನ ಸೆಳೆದರು.