ಹೊಸಪೇಟೆ: ವೈಕುಂಠ ಏಕಾದಶಿ ನಿಮಿತ್ತ ನಗರದ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಆರ್ಯವೈಶ್ಯ ಸಂಘ
ನಗರದ ಹಂಪಿ ರಸ್ತೆಯಲ್ಲಿನ ವಾಸವಿ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ನಸುಕಿನ ಜಾವ ನಾಲ್ಕು ಗಂಟೆಗೆ ವಿಶೇಷ ಅಭಿಷೇಕ ಮಾಡಿ, ಹೂವಿನಿಂದ ಅಲಂಕರಿಸಲಾಯಿತು. ಹೋಮ ಹವನ, ನೈವೇದ್ಯ, ಆರತಿ ಮಾಡಲಾಯಿತು. ವಿಶೇಷ ವೈಕುಂಠ ಮಾರ್ಗ ನಿರ್ಮಿಸಿ, ದಾರಿಯಲ್ಲಿ ಪುಷ್ಪ, ದೀಪಗಳಿಂದ ಅಲಂಕರಿಸಿ, ಸುಗಂಧ ದ್ರವ್ಯ ಸಿಂಪಡಿಸಿದರು.
ದೇವಸ್ಥಾನಕ್ಕೆ ಬಂದ ಭಕ್ತರಿಗೆ ಉಚಿತವಾಗಿ ಲಾಡು ವಿತರಿಸಲಾಯಿತು. ಸಂಜೆ ವಿಷ್ಣು ಸಹಸ್ರನಾಮ ಕಾರ್ಯಕ್ರಮ ಜರುಗಿತು.
ಅಮರಾವತಿ
ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯೇ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜನ ಸಾಲುದ್ದದ ಸಾಲಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆದರು. ವಿಶೇಷವಾಗಿ ನಿರ್ಮಿಸಿದ್ದ ವೈಕುಂಠ ಮಾರ್ಗ ಪ್ರವೇಶಿಸಿ ಧನ್ಯತೆ ಮೆರೆದರು. ಭಕ್ತರಿಗೂ ಲಾಡು ಪ್ರಸಾದ ವಿತರಿಸಲಾಯಿತು.
ಮೇನ್ ಬಜಾರ್
ಇಲ್ಲಿನ ವಡಕರಾಯ ದೇಗುಲದ ವೆಂಕಟೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು. ವಿವಿಧ ಕಡೆಗಳಿಂದ ಜನ ಬಂದು ದೇವರ ದರ್ಶನ ಪಡೆದರು.