ಹೊಸಪೇಟೆ(ವಿಜಯನಗರ): ‘ಸಫಾಯಿ ಕರ್ಮಚಾರಿ ಆಯೋಗದಿಂದ ಪೌರಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಆಯೋಗದ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯ ರಾಮುಡು ತಿಳಿಸಿದರು.
ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೌರಕಾರ್ಮಿಕರ ಜಾಗೃತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪೌರ ಕಾರ್ಮಿಕರು ಕೋವಿಡ್ನಲ್ಲಿ ಎದೆಗುಂದದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನಾರ್ಹ. ಪೌರಕಾರ್ಮಿಕರ ಹಿತಕ್ಕಾಗಿ ಸರ್ಕಾರ ಅನೇಕ ರೀತಿಯ ಸವಲತ್ತುಗಳನ್ನು ಜಾರಿಗೊಳಿಸಿದೆ. ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ, ‘ಆಯೋಗದಿಂದ ಪೌರಕಾರ್ಮಿಕರಿಗೆ ಯಾವೆಲ್ಲ ಸವಲತ್ತುಗಳಿವೆ ಎನ್ನುವುದರ ಬಗ್ಗೆ ನಗರಸಭೆ ಕಚೇರಿಯಲ್ಲಿ ಮಾಹಿತಿ ನೀಡಲಾಗುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಇದೇ ವೇಳೆ ಪೌರಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಿಟ್ ವಿತರಿಸಲಾಯಿತು. ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮನ್ಸೂರ್ ಅಹಮ್ಮದ್, ಪರಿಸರ ಎಂಜಿನಿಯರ್ ಆರತಿ, ಉದ್ಯಮಿ ರವಿಶಂಕರ್ ಇದ್ದರು.