ಹೊಸಪೇಟೆ: ‘ಯುವಕರು ದೊಡ್ಡ ಕನಸುಗಳನ್ನು ಕಾಣಬೇಕು. ದೊಡ್ಡ ಕನಸುಗಳಿಂದ ದೊಡ್ಡ ಸಾಧನೆ ಮಾಡಲು ಸಾಧ್ಯ’ ಎಂದು ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಶಶಿಧರ್ ತಿಳಿಸಿದರು.
ಕೋರ್ ಎಜ್ಯುಕೇಷನ್ ಟ್ರಸ್ಟ್ನ ಕ್ಯಾಡ್ ತರಬೇತಿ ಕೇಂದ್ರದಿಂದ ಇತ್ತೀಚೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕೌಶಲ ದಿನಾಚರಣೆ ಹಾಗೂ ಬಿ. ಹರೀಶ್ ಅವರು ‘ಕನಸು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
‘ಜಾಗತಿಕ ಮಟ್ಟದಲ್ಲಿ ಉದ್ಯೋಗ ಮಾರುಕಟ್ಟೆಯ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಉಂಟಾಗಿದೆ. ಎಲ್ಲರ ಗಮನ ಈಗ ಕೌಶಲದ ಮೇಲೆ ಕೇಂದ್ರೀಕರಿಸಿದೆ. ವಿನೂತನವಾದ ಕೌಶಲ, ಹೊಸಬಗೆಯ ತಾಂತ್ರಿಕತೆ, ತಾಂತ್ರಿಕ ಕೌಶಲವನ್ನು ಅನುಸರಿಸಿ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಕೊಡುತ್ತಿವೆ’ ಎಂದು ವಿವರಿಸಿದರು.
‘ಶಿಕ್ಷಣ ಪಡೆದು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತರಾದರೆ ಸಾಲದು. ಗಳಿಸಿದ ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು. ಕೌಶಲ ಇದ್ದವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ತಿಳಿಸಿದರು.
ನಿವೃತ್ತ ಶಿಕ್ಷಕ ಮಾ.ಬ. ಸೋಮಣ್ಣ, ಗ್ಲೋಬಲ್ ಎನ್ವಿರಾನ್ಮೆಂಟ್ ಮತ್ತು ಮೈನಿಂಗ್ ಸರ್ವಿಸೆಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಮೇಶ್ವರರಾವ, ಪ್ರಾಧ್ಯಾಪಕಿ ಪಾರ್ವತಿ, ಬಿ. ಹರೀಶ್ ಇದ್ದರು. ಕ್ಯಾಡ್ ಕೇಂದ್ರದ ವಿದ್ಯಾರ್ಥಿಗಳಿಗೆ ಕೌಶಲ ಪ್ರಶಸ್ತಿ ಪ್ರದಾನ ಮಾಡಲಾಯಿತು.