ಬೆಂಗಳೂರು: ‘ತಂತ್ರಜ್ಞಾನವು ಭವಿಷ್ಯದಲ್ಲಿ ಆರ್ಥಿಕತೆಯ ಶಕ್ತಿ ವಾಹಕವಾಗಿದೆ.ವೃತ್ತಿಯಲ್ಲಿ ಕೃತಕ ಬುದ್ಧಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ’ ಎಂದುಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಅಧ್ಯಕ್ಷ ದೇಬಾಶಿಸ್ ಮಿತ್ರಾ ಸಲಹೆ ನೀಡಿದರು.
ಶುಕ್ರವಾರ ಇಲ್ಲಿ ಆರಂಭವಾದಲೆಕ್ಕಪರಿಶೋಧಕರ 18ನೇ ರಾಜ್ಯಮಟ್ಟದ ಎರಡು ದಿನದ ಸಮ್ಮೇಳನ ‘ಜ್ಞಾನ ಸಂಗಮ’ದಲ್ಲಿ ಅವರು, ‘ತಂತ್ರಜ್ಞಾನ ವಿಷಯ ಲೆಕ್ಕಪರಿಶೋಧನಾ ಪಠ್ಯದಲ್ಲಿ ಇಲ್ಲದೇ ಇರಬಹುದು. ಆದರೆ, ಅದು ಬದುಕಿನ ಭಾಗ’ ಎಂದು ಹೇಳಿದರು.
‘ತಂತ್ರಜ್ಞಾನವನ್ನು ಡಿಜಿಟಲ್ ಪೂರ್ವ ಮತ್ತು ಡಿಜಿಟಲ್ ನಂತರದ ಅವಧಿ ಎಂದು ಗುರುತಿಸಬಹುದು. ಡಿಜಿಟಲ್ ನಂತರದ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಮೂಲಕ ನಡೆಯುವ ವಂಚನೆಗಳ ಪತ್ತೆ, ವೃತ್ತಿ ಬೆಳವಣಿಗೆಗೆ ತಂತ್ರಜ್ಞಾನದ ಅರಿವು ಲೆಕ್ಕಪರಿಶೋಧಕರಿಗೆ ಅಗತ್ಯವಾಗಿದೆ’ ಎಂದರು.
ದಕ್ಷಿಣ ಭಾರತದ ಪ್ರಾದೇಶಿಕಲೆಕ್ಕಪರಿಶೋಧಕರ ಪರಿಷತ್ ಅಧ್ಯಕ್ಷ ಚಿನಾ ಮಸ್ತಾನ್ ತಲಕಾಯಲ ಮಾತನಾಡಿ, ‘1947ರ ನಂತರದಿಂದ ಇದುವರೆಗೆ ಲೆಕ್ಕಪರಿಶೋಧಕರು ಸಲ್ಲಿಸಿದ ಪ್ರಬಂಧಗಳು ಸೇರಿ ಎಲ್ಲವನ್ನೂ ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಸುಮಾರು ಮೂರೂವರೆ ಕೋಟಿ ದಾಖಲೆಗಳು ಡಿಜಿಟಲೀಕರಣಗೊಳ್ಳಲಿವೆ. ಇದರಿಂದ ಹಿರಿಯ ಲೆಕ್ಕಪರಿಶೋಧಕರು ತಾವು ವಿದ್ಯಾರ್ಥಿಯಾಗಿದ್ದಾಗ ಸಲ್ಲಿಸಿದ ಪ್ರಬಂಧಗಳನ್ನು ಸಹ ವೀಕ್ಷಿಸಬಹುದಾಗಿದೆ’ ಎಂದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷ ಟಿ. ಶ್ರೀನಿವಾಸ್, ಪದಾಧಿಕಾರಿಗಳಾದ ಎ.ಬಿ. ಗೀತಾ, ಪ್ರಮೋದ್ ಹೆಗ್ಡೆ, ಎಸ್. ಪನ್ನುರಾಜ್, ಎಸ್. ದಿವ್ಯಾ ಇದ್ದರು.