ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಎಂಜಿನಿಯರ್‌ಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಘನ ತ್ಯಾಜ್ಯ ಸಂಸ್ಕರಣೆಗೆ ನೀಡಿದ್ದ ಜಮೀನು ಅಡವಿಟ್ಟ ಪ್ರಕರಣ
Last Updated 19 ಸೆಪ್ಟೆಂಬರ್ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಗ್ರಹ ವಾಗುವ ಘನ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಗಾಗಿ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಕಂಪನಿಗೆ ನೀಡಿದ್ದ ಸರ್ಕಾರಿ ಜಮೀನು ಅಡವಿಟ್ಟು ಸಾಲ ಪಡೆದು ವಂಚಿಸಿದ ಮತ್ತು ತ್ಯಾಜ್ಯ ಸಂಸ್ಕರಿಸದ ಕಂಪನಿಗೆ ₹ 4.61 ಕೋಟಿ ಶುಲ್ಕ ಪಾವತಿಸಿದ ಪ್ರಕರಣದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಾಲ್ವರು ಎಂಜಿನಿಯರುಗಳ ಮನೆ ಹಾಗೂ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ದಾಳಿ ನಡೆಸಿದೆ.

ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ವಿ. ರವಿ ಅವರ ಜಯನಗರದ ನಿವಾಸ ಮತ್ತು ಪಾಲಿಕೆ ಪ್ರಧಾನ ಕಚೇರಿ ಆವರಣದಲ್ಲಿರುವ ಕಚೇರಿ, ಪಾಲಿಕೆ ಜಾಗೃತ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ವೆಂಕಟೇಶಪ್ಪ ಅವರ ಕಲ್ಯಾಣನಗರದ ಮನೆ ಹಾಗೂ ಪಾಲಿಕೆ ಪ್ರಧಾನ ಕಚೇರಿಯಲ್ಲಿರುವ ಕಚೇರಿ, ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಶ್‌ ಅವರ ಇಂದಿರಾನಗರದ ಮನೆ, ಪಾಲಿಕೆಯ ಸಹಾಯಕ ಕಾರ್ನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ ಅವರ ಬನಶಂಕರಿ ಒಂದಲೇ ಹಂತದಲ್ಲಿರುವ ಮನೆಗಳ ಮೇಲೆ ಶನಿವಾರ ಬೆಳಿಗ್ಗೆಯೇ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ತ್ಯಾಜ್ಯ ಸಂಸ್ಕರಣೆಯ ಗುತ್ತಿಗೆ ಪಡೆದ ಖಾಸಗಿ ಕಂಪನಿಯು ಸರ್ಕಾರಿ ಜಮೀನು ಅಡವಿಟ್ಟು ₹ 52.75 ಕೋಟಿ ಸಾಲ ಪಡೆಯಲು ಮತ್ತು ಅಕ್ರಮವಾಗಿ ₹ 4.61 ಕೋಟಿ ಶುಲ್ಕ ಪಾವತಿಗೆ ನೆರವಾಗಿರುವ ಆರೋಪ ನಾಲ್ವರು ಅಧಿಕಾರಿಗಳ ಮೇಲಿದೆ. ಎಸಿಬಿಯ ಬೆಂಗಳೂರು ನಗರ ಎಸ್‌ಪಿ ಕುಲದೀಪ್‌ಕುಮಾರ್ ಆರ್‌. ಜೈನ್‌ ನೇತೃತ್ವದಲ್ಲಿ ಆರು ಸ್ಥಳಗಳಲ್ಲಿ ಶೋಧ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆಪ್ಟೆಂಬರ್‌ 8ರಂದು ಪ್ರಕರಣ ದಾಖಲಿಸಿದ್ದರು. ಅದೇ ದಿನ ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ, ಪಾಲಿಕೆಯ ನಿವೃತ್ತ ಸಹಾಯಕ ಎಂಜಿನಿಯರ್‌ಗಳಾದ ಶಿವಲಿಂಗೇಗೌಡ ಮತ್ತು ಚನ್ನಕೇಶವ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಶನಿವಾರದ ಕಾರ್ಯಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT