ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಕ್ಕೂರು ಮೇಲ್ಸೇತುವೆಯಲ್ಲಿ ಮೇ 22ರಂದು ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಂಜಯ್ (11) ಎಂಬಾತ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಅಸುನೀಗಿದ್ದಾನೆ.
‘ಹಿಂದೂಪುರ ಬಾಲಕ ಸಂಜಯ್, ಜಕ್ಕೂರಿನ ಪಾನಿಪುರಿ ವ್ಯಾಪಾರಿ ಗೋವಿಂದಪ್ಪ (46) ಅವರ ಮನೆಗೆ ಬಂದಿದ್ದ. ಸಂಜಯ್ನಿಗೆ ವಿಮಾನ ತೋರಿಸಲೆಂದು ಗೋವಿಂದಪ್ಪ ಅವರು ಟಿವಿಎಸ್ ಮೊಪೆಡ್ ದ್ವಿಚಕ್ರ ವಾಹನದಲ್ಲಿ ಏರೋಡ್ರಮ್ ಬಳಿ ಕರೆದೊಯ್ಯುತ್ತಿದ್ದರು’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.
‘ಅತೀ ವೇಗವಾಗಿ ಬಂದಿದ್ದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಸಂಜಯ್ ತೀವ್ರ ಗಾಯಗೊಂಡಿದ್ದ. ಗೋವಿಂದಪ್ಪ ಮೇಲ್ಸೇತುವೆಯಿಂದ ಕೆಳ ರಸ್ತೆಗೆ ಬಿದ್ದು ಮೃತಪಟ್ಟಿದ್ದರು. ಅಪಘಾತ ಸಂಬಂಧ ಕಾರು ಚಾಲಕ ವರುಣ್ನನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.