ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಗುದ್ದಿ ಇಬ್ಬರು ಯುವಕರ ದುರ್ಮರಣ

Last Updated 24 ಫೆಬ್ರುವರಿ 2021, 15:00 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಕಾರೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ್ದು, ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ.

‘ರಾಜಾಜಿನಗರದ ಶ್ರೀಕಾಂತ್ (26) ಹಾಗೂ ಗೌತಮ್ (22) ಮೃತರು. ಫೆ. 23ರಂದು ತಡರಾತ್ರಿ ಈ ಅವಘಡ ಸಂಭವಿಸಿದ್ದು, ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತಕ್ಕೆ ಕಾರಣ ಎನ್ನಲಾದ ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

‘ಮೃತ ಶ್ರೀಕಾಂತ್, ಸ್ವಿಗ್ಗಿ ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗೌತಮ್ ವಿದ್ಯಾರ್ಥಿ. ಒಂದೇ ಪ್ರದೇಶದಲ್ಲಿ ವಾಸವಿದ್ದ ಇಬ್ಬರೂ ಸ್ನೇಹಿತರಾಗಿದ್ದರು. ಶ್ರೀಕಾಂತ್ ಜೊತೆಯಲ್ಲಿ ಆಹಾರ ನೀಡಲು ಗೌತಮ್‌ ಆಗಾಗ ಹೋಗುತ್ತಿದ್ದರು.’

‘ಫೆ. 23ರಂದು ತಡರಾತ್ರಿ ಇಬ್ಬರೂ ಸೇರಿಕೊಂಡು ದ್ವಿಚಕ್ರ ವಾಹನದಲ್ಲಿ ಆಹಾರ ನೀಡಲು ಗ್ರಾಹಕರ ಮನೆಗೆ ಹೋಗಿದ್ದರು. ಆಹಾರ ಕೊಟ್ಟು ಜಾಲಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ಬರುತ್ತಿದ್ದರು. ಅದೇ ವೇಳೆಯೇ ವೇಗವಾಗಿ ಬಂದ ಕಾರೊಂದು, ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ಅದರ ರಭಸಕ್ಕೆ ರಸ್ತೆಯಲ್ಲಿ ಉರುಳಿ ಬಿದ್ದು ತೀವ್ರವಾಗಿ ಗಾಯಗೊಂಡ ಇಬ್ಬರೂ ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

‘ಸ್ಥಳದಲ್ಲಿ ಕಾರು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದ. ನೋಂದಣಿ ಸಂಖ್ಯೆ ಆಧರಿಸಿ ಕಾರು ಪತ್ತೆ ಮಾಡಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT