‘ಜಲಮಂಡಳಿಯು ವಾರ್ಷಿಕವಾಗಿ ಕಾವೇರಿ ನದಿಯಿಂದ 24 ಟಿಎಂಸಿ ಅಡಿ ನೀರನ್ನು ಬಳಸಿದರೆ, ಅದರಲ್ಲಿ ಶೇ 20ರಷ್ಟನ್ನು ‘ಕನ್ಸಂಟೀವ್ ಯೂಸ್’ ಎಂದು ವರ್ಗೀಕರಿಸಲಾಗುತ್ತದೆ. ಅಂದರೆ, ನದಿಯಿಂದ ಪಡೆದುಕೊಂಡ ನೀರನ್ನು ಬಳಸಿ, ಅದರಲ್ಲಿ ಶೇ 20ರಷ್ಟನ್ನು ನದಿಗೇ ವಾಪಸ್ ಹರಿಸಿದರೆ, ಆ ಪ್ರಮಾಣದ ನೀರನ್ನು ಹೆಚ್ಚುವರಿಯಾಗಿ ಪಡೆಯುವ ಅವಕಾಶ ಇರುತ್ತದೆ. ಈ ಆಧಾರದಲ್ಲಿ ಹೆಚ್ಚಿನ ನೀರಿನ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಗರದಲ್ಲಿ ಬಳಕೆಯಾದ ಬಹುತೇಕ ನೀರು ವೃಷಭಾವತಿ, ಅರ್ಕಾವತಿ ಹಾಗೂ ಕಾಲುವೆ– ಕಣಿವೆಗಳ ಮೂಲಕ ಕಾವೇರಿ ನದಿಯನ್ನೇ ಸೇರಿಕೊಳ್ಳುತ್ತಿದೆ’ ಎಂದು ಅಧಿಕಾರಿಗಳು ವಿವರ ನೀಡಿದರು.
ತಾತ್ವಿಕ ಒಪ್ಪಿಗೆ: ರಾಮ್ಪ್ರಸಾತ್
‘ನಗರದ ಜನಸಂಖ್ಯೆ ಹೆಚ್ಚಳ ಹಾಗೂ ಪ್ರದೇಶಗಳ ಅಭಿವೃದ್ಧಿಯಿಂದ ನೀರಿನ ಹಂಚಿಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಹೆಚ್ವುವರಿಯಾಗಿ 10 ಟಿಎಂಸಿ ಅಡಿ ನೀರನ್ನು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಉಳಿಸಿ ನೀಡುವುದಾಗಿ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ತಿಳಿಸಿದರು.