ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾ 2021: 'ಆತ್ಮನಿರ್ಭರ್' ಚಿತ್ತಾರದೊಂದಿಗೆ ವೈಮಾನಿಕ ಪ್ರದರ್ಶನ ಆರಂಭ

Last Updated 3 ಫೆಬ್ರುವರಿ 2021, 5:49 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಧ್ವಜ, ಭಾರತೀಯ ವಾಯುಪಡೆಯ ಧ್ವಜ ಹಾಗೂ ಏರೋ ಇಂಡಿಯಾ 2021ರ ಬಾವುಟಗಳನ್ನು ಹೊತ್ತ ಮೂರು ಎಂಐ–17 ಹೆಲಿಕಾಪ್ಟರ್‌ಗಳು ನೀಲಾಂಬರದಲ್ಲಿ ಸಾಗಿಬರುವ ಮೂಲಕ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ನಾಂದಿ ಹಾಡಿದವು.

ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಬುಧವಾರ ಚಾಲನೆ ನೀಡಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮದಲ್ಲಿದ್ದರು. ಕೋವಿಡ್‌ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಜಗತ್ತಿನಲ್ಲಿ ಮೊದಲ ವೈಮಾನಿಕ ಪ್ರದರ್ಶನ ಇದಾಗಿದೆ.

ರಫೇಲ್‌ ಜೆಟ್‌ಗಳು ಸಹ ಹಾರಾಟ ನಡೆಸಿವೆ.

ವಾಯುಪಡೆಯ ‘ಸೂರ್ಯಕಿರಣ್‌’ ಹಾಗೂ ‘ಸಾರಂಗ್‌’ ತಂಡಗಳು ಜಂಟಿ ಪ್ರದರ್ಶನ ನೀಡಲಿರುವುದು ಹಾಗೂ ಅಮೆರಿಕದ ಬಿ 1ಐಬಿ ಲ್ಯಾನ್ಸರ್‌ ಸೂಪರ್‌ಸಾನಿಕ್‌ ಬಾಂಬರ್‌ ವಿಮಾನ ಈ ಬಾರಿಯ ಪ್ರಮುಖ ಆಕರ್ಷಣೆಗಳು.

ಏರೋ ಇಂಡಿಯಾ 21 ಭಾರತದ ಅಪಾರ ಸಾಮರ್ಥ್ಯವನ್ನು ಮತ್ತು ರಕ್ಷಣಾ, ವಾಯುಯಾನ ಕ್ಷೇತ್ರದಲ್ಲಿ ನಮ್ಮ ದೇಶ ನೀಡುವ ಬಹುಮುಖಿ ಅವಕಾಶಗಳನ್ನು ಪ್ರದರ್ಶಿಸುತ್ತದೆ. ಇದು ವಿಶ್ವದ ಮೊದಲ ಹೈಬ್ರಿಡ್ ಏರೋ ಮತ್ತು ರಕ್ಷಣಾ ಪ್ರದರ್ಶನವಾಗಿ ಭರವಸೆ ಮೂಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಜಾಗತಿಕವಾಗಿ ಸಾಂಕ್ರಾಮಿಕ ರೋಗದಿಂದ ಉಂಟಾದ ನಿರ್ಬಂಧಗಳ ಹೊರತಾಗಿಯೂ, ಈ ವರ್ಷದ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವವರನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಈ ಕಾರ್ಯಕ್ರಮದಲ್ಲಿ 80 ವಿದೇಶಿ ಕಂಪನಿಗಳು, ರಕ್ಷಣಾ ಮಂತ್ರಿಗಳು, ಪ್ರತಿನಿಧಿಗಳು, ಸೇವಾ ಮುಖ್ಯಸ್ಥರು ಮತ್ತು 55ಕ್ಕೂ ಹೆಚ್ಚು ರಾಷ್ಟ್ರಗಳ ಅಧಿಕಾರಿಗಳು ಸೇರಿದಂತೆ ಸುಮಾರು 540 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಇದು ಜಾಗತಿಕ ಸಮುದಾಯದಲ್ಲಿ ಬೆಳೆಯುತ್ತಿರುವ ಆಶಾವಾದವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನಮ್ಮ ಭದ್ರತಾ ವಿಭಾಗವನ್ನು ಬಲಪಡಿಸಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೊಡ್ಡ ಮತ್ತು ಸಂಕೀರ್ಣ ರಕ್ಷಣಾ ವೇದಿಕೆಗಳ ದೇಶೀಯ ಉತ್ಪಾದನೆಯು ಈಗ 'ಆತ್ಮನಿರ್ಭರ ಭಾರತ್ ಅಭಿಯಾನ್' ಅಡಿಯಲ್ಲಿ ನಮ್ಮ ನೀತಿಯ ಕೇಂದ್ರಬಿಂದುವಾಗಿದೆ. ಮುಂದಿನ 7-8 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕಾಗಿ 130 ಬಿಲಿಯನ್ ಡಾಲರ್ ಖರ್ಚು ಮಾಡಲು ನಾವು ಯೋಜಿಸಿದ್ದೇವೆ ಎಂದರು.

ಈ ಪ್ರದರ್ಶನಕ್ಕೆ ಖುದ್ದಾಗಿ ಸೇರಿಕೊಂಡ ಮಾಲ್ಡೀವ್ಸ್, ಉಕ್ರೇನ್, ಈಕ್ವಟೋರಿಯಲ್ ಗಿನಿಯಾ, ಇರಾನ್, ಕೊಮರೊಸ್ ಮತ್ತು ಮಡಗಾಸ್ಕರ್‌ನ ರಕ್ಷಣಾ ಮಂತ್ರಿಗಳಿಗೆ ಮತ್ತು ಸೇರ್ಪಡೆಯಾಗುತ್ತಿರುವ ಇನ್ನೂ ಅನೇಕರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಭಾರತ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಶೇ 74 ಮತ್ತು ಸರ್ಕಾರಿ ಮಾರ್ಗದ ಮೂಲಕ ಶೇ 100 ರಷ್ಟರವರೆಗೆ ಹೆಚ್ಚಿಸಿದೆ. ಇದು ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಹಲವಾರು ಪ್ರಯತ್ನಗಳ ಹೊರತಾಗಿಯೂ ಗಡಿಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಬಲವನ್ನು ಬಳಸಿಕೊಳ್ಳುವ ದುರದೃಷ್ಟಕರ ಪ್ರಯತ್ನಗಳಿಗೆ ನಾವು ದೀರ್ಘಕಾಲದಿಂದ ಸಾಕ್ಷಿಯಾಗಿದ್ದೇವೆ. ಭಾರತವು ಜಾಗರೂಕವಾಗಿದೆ ಹಾಗೂ ನಮ್ಮ ಜನರನ್ನು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯವನ್ನು ಹಿಮ್ಮೆಟ್ಟಿಸುವ ಮತ್ತು ಸೋಲಿಸಲು ಸಿದ್ಧವಾಗಿದೆ. ಇದರೊಂದಿಗೆ ಭಾರತವು ಅನೇಕ ರಂಗಗಳಿಂದ ಹೊರಹೊಮ್ಮುವ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಭಾರತವು ಪ್ರಾಯೋಜಿತ ಉಗ್ರ ಭಯೋತ್ಪಾದನೆಗೆ ಬಲಿಯಾಗಿದೆ. ಇದು ಈಗ ಜಾಗತಿಕ ಸವಾಲಾಗಿ ಪರಿಣಮಿಸಿದೆ ಎಂದರು.

ಎಚ್‌ಎಎಲ್‌ ನಿರ್ಮಿತ ಲಘು ಬಳಕೆ ಹೆಲಿಕಾಪ್ಟರ್‌ ಮತ್ತು ಎರಡು ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಇಂಗ್ಲಿಷ್‌ ಅಕ್ಷರ ವಿ ಆಕಾರದಲ್ಲಿ ಸಾಗಿಬಂದವು.

ಲಘು ಯುದ್ಧ ಹೆಲಿಪಕಾಪ್ಟರ್‌ಗಳ ಗುಂಪು ಸಾಗಿಬಂತು.ನಾಲ್ಕು ರುದ್ರ ಲಘು ಯುದ್ಧ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್‌) ಜೊತೆಯಲ್ಲೇ ಹಾರಿ ಬಂದವು.

ಆತ್ಮನಿರ್ಭರ: ದೇಶವು ಸ್ವಾವಲಂಬನೆಯ ಹಾದಿಯಲ್ಲಿ ಸಾಗಲೆಂಬ ಆಶಯದೊಂದಿಗೆ ಈ ಬಾರಿ ಎಚ್‌ಎಎಲ್‌ ‘ಆತ್ಮನಿರ್ಭರ’ ಚಿತ್ತಾರ ಮೂಡಿಸಿತು. ಲಘು ಯುದ್ಧ ಹೆಲಿಕಾಪ್ಟರ್‌, ಹಾಕ್‌–ಐ, ಇಂಟರ್ ಮೀಡಿಯೇಟ್‌ ಜೆಟ್‌ ಟ್ರೈನರ್‌ (ಐಜೆಟಿ) ಹಾಗೂ ಎರಡು ತರಬೇತಿ ವಿಮಾನಗಳು (ಎಚ್‌ಟಿಟಿ–40) ಮತ್ತು ಡಾರ್ನಿಯರ್‌ 228 ವಿಮಾನಗಳ ಬಳಗ ವೈಮಾನಿಕ ಕ್ಷೇತ್ರದಲ್ಲಿ ದೇಸಿ ಹೆಜ್ಜೆಗುರುತುಗಳನ್ನು ಮೂಡಿಸುವ ಹುರುಪಿನೊಂದಿಗೆ ಧಾವಿಸಿಬಂದವು.

ಬಳಿಕ ನಾಲ್ಕು ರುದ್ರ ಲಘು ಯುದ್ಧ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್‌) ಜೊತೆಯಲ್ಲೇ ಹಾರಿ ಬಂದ ಪರಿ ಅಂಬರಕ್ಕೆ ವಜ್ರದುಂಗುರ ತೊಡಿಸಿದಂತೆ ಕಂಡಿತು.

ಎ 145 ವಾಯುಜನ್ಯ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ ಅಳವಡಿಸಿದ ನೇತ್ರಾ ವಿಮಾನ ರಾಜಗಾಂಭೀರ್ಯದಿಂದ ಸಾಗಿತು. ಸಂಪೂರ್ಣ ಸ್ವದೇಶೀ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯನ್ನು ಬ್ರಜಿಲ್‌ ನಿರ್ಮಿತ ಎಂಬ್ರಾಯರ್‌ 145 ವಿಮಾನದಲ್ಲಿ ಅಳವಡಿಸಲಾಗಿದೆ.

ಒಂದು ಸಿ–17 ಗ್ಲೋಬ್‌ಮಾಸ್ಟರ್‌ ವಿಮಾನ ಎರಡು ಸುಖೋಯ್‌ 30 ಎಂಕೆ–1 ವಿಮಾನಗಳು ವೀ ಆಕಾರದಲ್ಲಿ ನುಗ್ಗಿಬಂದವು.

ಎರಡು ತೇಜಸ್‌ ಲಘು ಯುದ್ಧ ವಿಮಾನಗಳ ಗುಂಪು ಸದ್ದು ಮೊಳಗಿಸುತ್ತಾ ನಭದಲ್ಲಿ ಸಾಗಿತು.

ಗಮನ ಸೆಳೆದ ಬ್ರಹ್ಮಾಸ್ತ್ರ: ನಂತರ ನುಗ್ಗಿ ಬಂದಿದ್ದು ಭಾರತದ ವಾಯುಪಡೆಯ ಹೊಸ ಬ್ರಹ್ಮಾಸ್ತ್ರ ರಫೇಲ್‌. ಮೂರು ರಫೇಲ್‌ ವಿಮಾನಗಳು ಚಿತ್ತಾಕರ್ಷಕ ವಿನ್ಯಾಸಗಳನ್ನು ಪ್ರದರ್ಶಿಸಿದವು.

ಒಂದು ಸುಖೋಯ್‌ 30ಎಂಕೆ–1, ಎರಡು ಜಾಗ್ವಾರ್‌ ವಿಮಾನಗಳು, ಎರಡು ಹಾಕ್‌ ವಿಮಾನಗಳ ಸೇರು ಐದು ವಿಮಾನಗಳ ಸಮೂಹ ಮೂಡಿಸಿದ ಗರುಡ ಚಿತ್ತಾರ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು.

ಆಗಸದಲ್ಲಿ ಮೂಡಿದ ತ್ರಿಶೂಲ: ಮೂರು ಸುಖೋಯ್‌ 30 ಎಂಕೆ–1 ವಿಮಾನಗಳು ಅಕ್ಷರಶ: ಯಲಹಂಕದ ಬಾನಿನ ಉದ್ದಗಲವನ್ನು ಆವರಿಸಿ ಬಿಟ್ಟವು. ಕಿವಿಗಡಚಿಕ್ಕುವ ಸದ್ದು ಮೊಳಗಿಸುತ್ತಾ ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಆರ್ಭಟಿಸಿದ ಈ ಯುದ್ಧ ವಿಮಾನಗಳು ಪ್ರಶಾಂತವಾದ ನೀಲಾಗಸದಲ್ಲಿ ರುದ್ರ ನರ್ತನ ಮಾಡಿದವು.

ಅಮೆರಿಕದ ಬಿ1ಬಿ ಬಹೂಪಯೋಗಿ ಬಾಂಬರ್ ವಿಮಾನವು ಪ್ರದರ್ಶನದ ಆಕರ್ಣಣೆಯಾಗಿತ್ತು. ತೇಜಸ್ ವಿಮಾನದ ಜೊತೆ ಈ ವಿಮಾನ ಸಾಗಿಬಂತು. ಇವೆಲ್ಲವುಗಳಿಗಿಂತಲೂ ಪ್ರೇಕ್ಷಕರ ಮನದಲ್ಲಿಅಚ್ಚಳಿಯದೆ ದಾಖಲಾಗಿದ್ದು ಸೂರ್ಯಕಿರಣ ಮತ್ತು ಸಾರಂಗ ತಂಡಗಳ ಚಿನ್ನಾಟ. ನೀಲಾಂಬರದಲ್ಲಿ ಹೊಗೆಯ ಗೆರೆಗಳನ್ನು ಬರೆಯುತ್ತಾ ಶರವೇಗದಲ್ಲಿ ಸಾಗಿದ ಕಡುಗೆಂಪು ಪಟ್ಟಿಗಳಿರುವ ಸೂರ್ಯಕಿರಣ ವಿಮಾನಗಳ ರೋಮಾಂಚನಕಾರಿ ವಿನ್ಯಾಸಗಳನ್ನ ಮನ ತುಂಬಿಕೊಳ್ಳುವುದೋ ಅಥವಾ ಕುಣಿದು ಕುಪ್ಪಳಿಸುತ್ತಿದ್ದ ಸಾರಂಗ ತಂಡದ ಹೆಲಿಕಾಪ್ಟರ್‌ಗಳು ಬಾನಿನಲ್ಲಿ ಮೂಡಿಸಿದ ಬಣ್ಣದೋಕುಳಿಯನ್ನು ಕಣ್ಣಿಗೆ ತುಂಬಿಸಿಕೊಳ್ಳುವುದೋ ಎಂದು ಪ್ರೇಕ್ಷಕರು ದ್ವಂದ್ವದಲ್ಲಿ ಮುಳುಗುವಂತಿತ್ತು ಈ ತಂಡಗಳ ಪ್ರದರ್ಶನ.

ಉದ್ಘಾಟನಾ ಸಮಾರಂಭದ ವಿಡಿಯೊ ಲೈವ್‌–

ಉಚಿತ ವೀಕ್ಷಣೆ

‘ಏರೊ ಇಂಡಿಯಾ 2021’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನೋಂದಣಿ ಮಾಡಿಕೊಂಡವರು ಉಚಿತವಾಗಿ ಪ್ರದರ್ಶನವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT