ಬೆಂಗಳೂರು: ಗಗನಸಖಿ ಅರ್ಚನಾ ಧಿಮಾನ್ (28) ಅವರ ಶಂಕಾಸ್ಪದ ಸಾವಿನ ಪ್ರಕರಣ ಸಂಬಂಧ, ಸ್ನೇಹಿತ ಆದೇಶ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
‘ಹಿಮಾಚಲ ಪ್ರದೇಶದ ಅರ್ಚನಾ, ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಆದೇಶ್ ಭೇಟಿಗೆ ಮಾರ್ಚ್ 10ರಂದು ನಗರಕ್ಕೆ ಬಂದಿದ್ದರು. ಕೋರಮಂಗಲದ ಅಪಾರ್ಟ್ಮೆಂಟ್ನಲ್ಲಿ ಉಳಿದಿದ್ದು, 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
‘ಅರ್ಚನಾ ಸಾವಿನ ಸಂಬಂಧ ಪೋಷಕರು ದೂರು ನೀಡಿದ್ದಾರೆ. ಸ್ನೇಹಿತ ಆದೇಶ್ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿದರು.
ಮದ್ಯದ ಅಮಲಿನಲ್ಲಿ ಗಲಾಟೆ: ‘ಆದೇಶ್ ಹಾಗೂ ಅರ್ಚನಾ ಪರಸ್ಪರ ಪ್ರೀತಿಸುತ್ತಿದ್ದರು. ಮಾರ್ಚ್ 10ರಂದು ಫ್ಲ್ಯಾಟ್ನಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಅಮಲಿನಲ್ಲಿ ಜಗಳವಾಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದರು.