ಯಲಹಂಕ: ‘ಸರ್ಕಾರಿ ಶಾಲೆಯಲ್ಲಿ ಓದಿರುವ ನನಗೆ ಶಾಲೆಯ ಮಹತ್ವ ಗೊತ್ತು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.
ಅಳ್ಳಾಳಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು,
ಸರ್ಕಾರಿ ಶಾಲೆಗಳನ್ನು ಮುಚ್ಚುವ ಮತ್ತು ಮರೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿವೆ. ವಿದ್ಯೆ ನೀಡಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ ಶಾಲೆಯ ಬಗ್ಗೆ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರು, ಕಾರ್ಯನಿರ್ವಹಿಸುತ್ತಿರುವ, ವರ್ಗಾವಣೆಗೊಂಡಿರುವ ಶಿಕ್ಷಕರು ಹಾಗೂ ಸಾಧಕ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಮೃತಮಹೋತ್ಸದ ಪ್ರಯುಕ್ತ ಮಕ್ಕಳು ಹಾಗೂ ಹಳೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜವಳಿ ಇಲಾಖೆಯ ಜಂಟಿ ನಿರ್ದೇಶಕ ಸುರೇಶ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯ ಎಂ. ಮುನಿರಾಜು, ಹಳೇ ವಿದ್ಯಾರ್ಥಿಗಳಾದ ಚಂದ್ರೇಗೌಡ, ಗೋಪಿ, ಎಸ್. ಸೋಮಶೇಖರ್, ಮುನಿ ಆಂಜಿನಪ್ಪ, ಸಿ. ಶಶಿಕುಮಾರ್, ಎನ್. ತಿಮ್ಮರಾಜು, ಮುಖ್ಯಶಿಕ್ಷಕಿ ಎಚ್.ಎಸ್. ಹೇಮಾವತಿ ಉಪಸ್ಥಿತರಿದ್ದರು.