ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವಲ್ಲಿ ಸರ್ಕಾರದ ಹಂತದಲ್ಲಿ ಯಾವುದೇ ವಿಳಂಬವಾಗುತ್ತಿಲ್ಲ. ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ನಿಗದಿಯಾಗಿರುವ ಅನುದಾನಕ್ಕೆ ಸಂಬಂ ಧಿಸಿದ ಕ್ರಿಯಾಯೋಜನೆಗಳನ್ನು ಆದ್ಯತೆ ಮೇರೆಗೆ ಅನುಮೋದಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಿಗೆ ಈ ಯೋಜನೆ ಅಡಿ ಅನುದಾನ ಹಂಚಿಕೆ ಮಾಡಿ ಸಂಬಂಧಪಟ್ಟ ಕ್ರಿಯಾ ಯೋಜನೆ ಗಳನ್ನು 15 ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ 2022ರ ಫೆ.25ರಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಬಿಬಿಎಂಪಿಯಿಂದ ಸಲ್ಲಿಕೆಯಾಗುತ್ತಿರುವ ವಿಧಾನಸಭಾ ಕ್ಷೇತ್ರವಾರು ಕ್ರಿಯಾಯೋಜನೆ ಳನ್ನು ಪರಿಶೀಲಿಸಿ ಮುಖ್ಯಮಂತ್ರಿ ಅವರ ಅನುಮೋದನೆ ಪಡೆದು ಕ್ರಿಯಾ ಯೋಜನೆಯ ಆದೇಶ ಹೊರಡಿಸಲಾ ಗುತ್ತಿದೆ. ಮುಖ್ಯಮಂತ್ರಿ ಸಚಿವಾಲಯದ ಯಾವುದೇ ಅಧಿಕಾರಿಯ ಹಸ್ತಕ್ಷೇಪವೂ ಈ ಪ್ರಕ್ರಿಯೆಯಲ್ಲಿ ಆಗಿರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ.
ಬಿಬಿಎಂಪಿಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳ ಕ್ರಿಯಾಯೋಜನೆಗಳೂ ಅನುಮೋದನೆಗೊಂಡಿದ್ದು, ಆದೇಶ ಹೊರಡಿಸಲಾಗಿದೆ. ಈ ಯೋಜನೆಯ ಸಕಾಲಿಕ ಅನುಷ್ಠಾನಕ್ಕೆ ಶ್ರಮವಹಿಸಲಾಗುತ್ತಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.
ವಿಳಂಬವಿಲ್ಲ: ಮುಖ್ಯಮಂತ್ರಿ ಸಚಿ ವಾಲಯ ‘ನಗರದ 10 ಕ್ಷೇತ್ರಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆಯ ಕಡತಗಳು ಮುಖ್ಯಮಂತ್ರಿ ಸಚಿವಾಲ ಯಕ್ಕೆ ಸಲ್ಲಿಕೆಯಾಗಿದ್ದರೂ ಕಾರ್ಯಾದೇಶ ಜಾರಿ ಆಗಿಲ್ಲ ಎಂಬುದು ವಾಸ್ತವಾಂಶಕ್ಕೆ ದೂರವಾದುದು. ಸಲ್ಲಿಕೆಯಾಗಿರುವ ಕಡತಗಳಿಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದು, ವಿಳಂಬ ಇಲ್ಲದೇ ವಿಲೇವಾರಿ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಮುಖ್ಯಮಂತ್ರಿ ಸಚಿವಾಲಯದಲ್ಲಿ ಅನುದಾನ ಮಂಜೂರಾತಿ ವಿಳಂಬವಾಗಲು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಯ ಹಸ್ತಕ್ಷೇಪ ಕಾರಣ ಎಂಬ ಆರೋಪವೂ ಸತ್ಯಕ್ಕೆ ದೂರವಾದುದು’ ಎಂದು ಅವರು ತಿಳಿಸಿದ್ದಾರೆ.
‘ಪ್ರಜಾವಾಣಿ’ಯು ಗುರುವಾರದ ಸಂಚಿಕೆಯಲ್ಲಿ ಈ ಯೋಜನೆ ಅನುಷ್ಠಾ ನದ ಕುರಿತು ‘15 ಕ್ಷೇತ್ರಗಳಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ’ ಎಂಬ ಶೀರ್ಷಿಕೆ ಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. 2021ರ ಆ.15ರಂದೇ ಮುಖ್ಯಮಂತ್ರಿಯವರು ಯೋಜನೆಯನ್ನು ಘೋಷಿಸಿ ದ್ದರೂ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಕ್ರಿಯಾ ಯೋಜನೆ ಅಂತಿಮಗೊಂಡಿಲ್ಲ ಎಂಬ ಬಗ್ಗೆ ಗಮನ ಸೆಳೆದಿತ್ತು. ಕ್ರಿಯಾಯೋಜನೆಗಳನ್ನು ಯಾವ ಹಂತದಲ್ಲಿವೆ ಎಂಬ ಬಗ್ಗೆ ವಿಧಾನಸಭಾ ಕ್ಷೇತ್ರವಾರು ಪಟ್ಟಿಯನ್ನೂ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.