ಬೆಂಗಳೂರು: ಡಿಸಿಎಂ ಹುದ್ದೆ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವ ಅಗತ್ಯ ಇಲ್ಲ ಎಂಬ ಡಿಸಿಎಂ ಅಶ್ವತ್ಥ ನಾರಾಯಣ ಅವರ ಸಲಹೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಸಾರಾಸಗಟಾಗಿ ತಳ್ಳಿಹಾಕಿದ್ದು, ಪಕ್ಷದಲ್ಲಿ 30 ವರ್ಷಗಳಿಂದ ಇರುವ ತಮಗೆ ಇಂತಹ ಪಾಠ ಹೇಳಿಕೊಡಬೇಕಿಲ್ಲ ಎಂದು ಹೇಳಿದ್ದಾರೆ.
ನಗರದ ಅಶೋಕ್ ಹೋಟೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಡಿಸಿಎಂ ಹುದ್ದೆ ತೆರವುಗೊಳಿಸುವ ಬಗ್ಗೆ ಪ್ರಧಾನಿ, ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಿದ್ದು, ಒಂದೆರಡು ದಿನಗಳಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರನ್ನು ಭೇಟಿ ಮಾಡಿ ಇದೇ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.
ಅಶ್ವತ್ಥನಾರಾಯಣ ಅವರು ಕಳೆದ ಬಿಬಿಎಂಪಿ ಚುನಾವಣೆ ವೇಳೆ ಯಡಿಯೂರಪ್ಪ ವಿರುದ್ಧ ಎಂತಹ ನಿಲುವು ತಳೆದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಪಕ್ಷದ ಮೇಲೆ ಪ್ರೀತಿ ಇದ್ದರೆ ತಮ್ಮ ಡಿಸಿಎಂ ಸ್ಥಾನವನ್ನು ತ್ಯಾಗ ಮಾಡಿ ಇತರರಿಗೆ ಮಾದರಿ ಆಗಲಿ ಎಂದು ಸವಾಲು ಹಾಕಿದರು.