ಬೆಂಗಳೂರು: ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ಆ್ಯಸಿಡ್ ಹಾಗೂ ಪೆಟ್ರೋಲ್ ಮೈ ಮೇಲೆ ಎರಚಿ ಬೆಂಕಿ ಹಚ್ಚಿದ್ದರಿಂದ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಜ್ಯೋತಪ್ಪ (50) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಅಸುನೀಗಿದ್ದಾರೆ.
‘ಬಿ.ಹೊಸಹಳ್ಳಿ ನಿವಾಸಿ ಜ್ಯೋತಪ್ಪ ಅವರು ತಿನಿಸು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಒಬ್ಬರೇ ಬೈಕ್ನಲ್ಲಿ ಹೊರಟಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು.’ ಎಂದು ಸೂರ್ಯಸಿಟಿ ಪೊಲೀಸರು ಹೇಳಿದರು.
‘ಬೈಕ್ ಅಡ್ಡಗಟ್ಟಿ ಜ್ಯೋತಪ್ಪ ಜೊತೆ ಜಗಳ ತೆಗೆದಿದ್ದ ದುಷ್ಕರ್ಮಿಗಳು, ಮೊದಲಿಗೆ ಮುಖಕ್ಕೆ ಆ್ಯಸಿಡ್ ಎರಚಿದ್ದರು. ನಂತರ, ಮೈ ಮೇಲೆಲ್ಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದ ಜ್ಯೋತಪ್ಪ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದರು.
‘ಶೇ 95ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಕೃತ್ಯಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿದರು.