ಬೆಂಗಳೂರು: ಆಟೊ ಚಾಲಕನನ್ನು ಪ್ರಯಾಣಿಕರ ಸೋಗಿನಲ್ಲಿ ಬಾಡಿಗೆಗೆ ಕರೆದೊಯ್ದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
‘ನಾಗೇಂದ್ರ, ದೊಡ್ಡವೀರೇಗೌಡ, ದರ್ಶನ್ ಹಾಗೂ ಶಿವಕುಮಾರ್ ಬಂಧಿತರು. ಅವರಿಂದ ₹ 3 ಲಕ್ಷ ಮೌಲ್ಯದ ಆಟೊ, ಚಿನ್ನದ ಸರ, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆಟೊ ಚಾಲಕರೊಬ್ಬರು ನ. 11ರಂದು ರಾತ್ರಿ 11 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಆಟೊಗೆ ಕೈ ಮಾಡಿದ್ದ ನಾಲ್ವರು ಆರೋಪಿಗಳು, ಲಗ್ಗೆರೆಗೆ ಬಾಡಿಗೆಗೆ ಬರುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಚಾಲಕ, ಆರೋಪಿಗಳನ್ನು ಹತ್ತಿಸಿಕೊಂಡು ಸ್ಥಳದಿಂದ ಹೊರಟಿದ್ದರು.’
‘ಆಟೊ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಚಾಲಕನ ಮೇಲೆ ಆರೋಪಿಗಳು ದಾಳಿ ಮಾಡಿದ್ದರು. ಚಿನ್ನದ ಸರ, ಎರಡು ಮೊಬೈಲ್ ಹಾಗೂ ನಗದು ಕಿತ್ತುಕೊಂಡಿದ್ದರು. ಸಹಾಯಕ್ಕಾಗಿ ಚಾಲಕ ಚೀರಾಡಿದ್ದರು. ಅವರನ್ನು ರಸ್ತೆಯಲ್ಲೇ ತಳ್ಳಿದ್ದ ಆರೋಪಿಗಳು, ಆಟೊ ಸಮೇತ ಪರಾರಿಯಾಗಿದ್ದರು’ ಎಂದೂ ಪೊಲೀಸರು ತಿಳಿಸಿದರು.